
ಬೆಳಗಾವಿ: ‘ಭ್ರಷ್ಟಾಚಾರದ ವಿಷಯದಲ್ಲಿ ಬಿಜೆಪಿ ನಾಯಕರದು ದ್ವಂದ್ವ ನೀತಿ. ಅವರದೇ ಪಕ್ಷ ಅಧಿಕಾರದಲ್ಲಿ ಇರುವ ಗುಜರಾತ್, ಛತ್ತೀಸಗಡ ಹಾಗೂ ಮಧ್ಯಪ್ರದೇಶ ಸರ್ಕಾರಗಳ ಭ್ರಷ್ಟಾಚಾರದ ಬಗ್ಗೆ ಅವರು ಮೌನ ವಹಿಸಿದ್ದಾರೆ’ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಶನಿವಾರ ಇಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಹಮ್ಮಿಕೊಂಡಿದ್ದ ‘ಭಾರತ ನಿರ್ಮಾಣ ರ್ಯಾಲಿ’ಯಲ್ಲಿ ಮಾತನಾಡಿದ ಅವರು, ‘ದೇಶದ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಬಿಜೆಪಿ ನಾಯಕರಿಗೆ ಕರ್ನಾಟಕದಲ್ಲಿ ನಡೆದ ಭ್ರಷ್ಟಾಚಾರ ಕಾಣುವುದಿಲ್ಲವೇ? ಬಿಜೆಪಿಯಿಂದ ಮುಖ್ಯಮಂತ್ರಿಯಾಗಿದ್ದವರು ಜೈಲಿಗೆ ಹೋಗಿದ್ದರು. ಅವರ ಸರ್ಕಾರದಲ್ಲಿ ಭ್ರಷ್ಟಾಚಾರದ ಆರೋಪ ಹೊತ್ತು 16 ಮಂತ್ರಿಗಳು ರಾಜೀನಾಮೆ ನೀಡುವಂತಾಯಿತು’ ಎಂದು ಲೇವಡಿ ಮಾಡಿದರು.
‘ಈ ಹಿಂದೆ ಕರ್ನಾಟಕದಲ್ಲಿ ಇದ್ದದ್ದು ಬಿಜೆಪಿ ಸರ್ಕಾರವಲ್ಲ, ಬಳ್ಳಾರಿ ಸರ್ಕಾರ’ ಎಂದು ಮೂದಲಿಸಿದರು. ‘ಕಾಂಗ್ರೆಸ್ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿದೆ. ಜನರ ಕೈಗೆ ಮಾಹಿತಿ ಹಕ್ಕು (ಆರ್ಟಿಐ) ಕಾಯ್ದೆ ಕೊಟ್ಟವರು ನಾವು. ಲೋಕಪಾಲ ಮಸೂದೆ ತಂದವರೂ ನಾವೇ. ಬಿಜೆಪಿಯವರು ಏನು ಮಾಡಿದ್ದಾರೆ’ ಎಂದು ಪ್ರಶ್ನಿಸಿದರು.
‘ದೇಶದಲ್ಲಿ ಮೊದಲ ಬಾರಿಗೆ ಕಂಪ್ಯೂಟರನ್ನು ರಾಜೀವ್ ಗಾಂಧಿ ತಂದಾಗ, ಇದು ಜನರ ಕೆಲಸ ವನ್ನು ಕಿತ್ತುಕೊಳ್ಳುತ್ತದೆ ಎಂದು ಬಿಜೆಪಿ ಯವರು ವಿರೋಧಿಸಿದ್ದರು. ಆದರೆ, ಇಂದು ಇದೇ ಕಂಪ್ಯೂಟರ್ ಎಷ್ಟು ಜನರಿಗೆ ನೌಕರಿ ಕೊಟ್ಟಿದೆ ನೀವೇ ಯೋಚಿಸಿ. ಅಂದು ಕಂಪ್ಯೂಟರ್ ವಿರೋಧಿಸಿದ ಬಿಜೆಪಿಯವರು ಇಂದು ಐ.ಟಿಯಲ್ಲಿ ಸೂಪರ್ ಪವರ್ ಮಾಡುತ್ತೇವೆ ಎನ್ನುತ್ತಿರುವುದು ವಿಪರ್ಯಾಸ’ ಎಂದು ಅವರು ಟೀಕಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಬಿಜೆಪಿ ನಾಯಕರಿಗೆ ಜನರ ಬಳಿ ಹೋಗಿ ಮುಖ ತೋರಿಸಲು ಆಗುತ್ತಿಲ್ಲ. ಹೀಗಾಗಿ ನರೇಂದ್ರ ಮೋದಿಯನ್ನು ಮುಂದಿಟ್ಟುಕೊಂಡು ಹೋಗುತ್ತಿದ್ದಾರೆ’ ಎಂದರು. ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್, ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಮತ್ತಿತರರು ವೇದಿಕೆಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.