ಮಂಗಳೂರು: ಕಾಸರಗೋಡು ಸಹಿತ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ದಿನವಿಡೀ ಮಳೆ ಸುರಿಯಿತು. ಆದರೆ ಮಳೆ ಇನ್ನೂ ಬಿರುಸು ಪಡೆದುಕೊಂಡಿಲ್ಲ.
ಮಂಗಳೂರು, ಮೂಡುಬಿದಿರೆ ಭಾಗದಲ್ಲಿ ಅಧಿಕ ಮಳೆ ಸುರಿದರೆ, ಜಿಲ್ಲೆಯ ಇತರ ಕಡೆಗಳಲ್ಲಿ ಮಳೆ ವಿರಳವಾಗಿತ್ತು. ಉಡುಪಿಯಲ್ಲಿ ಬಿಟ್ಟು ಬಿಟ್ಟು ಮಳೆ ಸುರಿಯಿತು. ಚಿಕ್ಕಮಗಳೂರು ಭಾಗದಲ್ಲಿ ಮೋಡ ಕವಿದ ವಾತಾವರಣ ಇದ್ದುದು ಬಿಟ್ಟರೆ ಮಳೆ ಸುರಿಯಲಿಲ್ಲ.
ಕಳೆದ 24 ಗಂಟೆಗಳಲ್ಲಿ ಮಂಗಳೂರಿನಲ್ಲಿ 45 ಮಿ.ಮೀ. ಮತ್ತು ಮೂಡುಬಿದಿರೆಯಲ್ಲಿ 52 ಮಿ.ಮೀ. ಮಳೆ ಸುರಿದಿದೆ.
ಸಾಮಾನ್ಯವಾಗಿ ಜೂನ್ 10ರೊಳಗೆ ಮುಂಗಾರು ಮಳೆಯಿಂದ ಭೂಮಿಯಲ್ಲಿ ಒರತೆ ಆರಂಭವಾಗಿರುತ್ತದೆ. ಆದರೆ ಈ ಬಾರಿ ಮಳೆ ವಿಳಂಬವಾಗಿದ್ದರಿಂದ ಹಾಗೂ ಎರಡು ದಿನದಿಂದ ಮಳೆ ಸುರಿಯುತ್ತಿದ್ದರೂ ಅದು ಬಿರುಸುಗೊಂಡಿಲ್ಲದ ಕಾರಣ ಮಳೆಗಾಲದ ವಾತಾವರಣ ಇನ್ನೂ ಮೂಡಿಲ್ಲ.
ಬಾಗಲಕೋಟೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ: ಹುಬ್ಬಳ್ಳಿ: ಬಾಗಲಕೋಟೆ ಮತ್ತು ಉತ್ತರ ಕನ್ನಡ ದಲ್ಲಿ ಮಂಗಳವಾರ ಭಾರಿ ಮಳೆಯಾಗಿದೆ.
ಬಾಗಲಕೋಟೆ ನಗರ ಹಾಗೂ ಜಿಲ್ಲೆಯ ಅಮೀನಗಡ ಸೇರಿದಂತೆ ಹಲವೆಡೆ ಸುಮಾರು ಅರ್ಧ ಗಂಟೆಗೂ ಅಧಿಕ ಹೊತ್ತು ಧಾರಾಕಾರ ಮಳೆ ಸುರಿಯಿತು. ಗಾಳಿ, ಗುಡುಗು, ಸಿಡಿಲಿನ ಆರ್ಭಟವಿಲ್ಲದೇ ಸುರಿದ ಮಳೆ ಮುಂಗಾರು ಬಿತ್ತನೆ ಆರಂಭಕ್ಕೆ ಹಸಿರು ನಿಶಾನೆ ತೋರಿಸಿತು.
ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಹಾಗೂ ಮಲೆನಾಡು ಪ್ರದೇಶದಲ್ಲಿ ಮಂಗಳವಾರ ಜಿಟಿ ಜಿಟಿ ಮಳೆಯಾದರೆ, ಅರೆಬಯಲುಸೀಮೆಯಲ್ಲಿ ಸಾಧಾರಣ ಮಳೆ ಇತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.