ಮಂಗಳೂರು: ಕೇಂದ್ರ ಸರ್ಕಾರದ ಪ್ರಸ್ತಾವಿತ ನೇರ ತೆರಿಗೆ ಸಂಹಿತೆ (ಡಿಟಿಸಿ) ವಿರುದ್ಧ `ಸಹಕಾರ ಭಾರತಿ~ ನೇತೃತ್ವದಲ್ಲಿ ಸಂಘಟಿತ ಹೋರಾಟ ಆರಂಭಿಸಿರುವ ದಕ್ಷಿಣ ಕನ್ನಡ ಜಿಲ್ಲೆಯ 780ಕ್ಕೂ ಅಧಿಕ ಸಹಕಾರ ಸಂಸ್ಥೆಗಳು ಶನಿವಾರ ಚಟುವಟಿಕೆ ಸ್ಥಗಿತಗೊಳಿಸಿ ಪ್ರತಿಭಟಿಸಿದವು.
ಇದೇ ನಿಟ್ಟಿನಲ್ಲಿ ನಗರದ ಪುರಭವನದಲ್ಲಿ ಶನಿವಾರ ಬೃಹತ್ ಪ್ರತಿಭಟನಾ ಸಮಾವೇಶವನ್ನೂ ಹಮ್ಮಿಕೊಳ್ಳಲಾಗಿತ್ತು. ಜ್ಲ್ಲಿಲೆಯ ಎಲ್ಲ ಸಹಕಾರಿ ಸಂಸ್ಥೆಗಳ ಅಧ್ಯಕ್ಷರು, ವ್ಯವಸ್ಥಾಪಕರು, ಪ್ರತಿನಿಧಿಗಳಿಂದ ಪುರಭವನ ಭರ್ತಿಯಾಗಿತ್ತು.
ನೇರ ತೆರಿಗೆಯ ಪ್ರತಿಕೂಲ ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದ ಲೆಕ್ಕಪರಿಶೋಧಕ ಡಿ.ವಿ.ರವೀಂದ್ರನಾಥ ಸಾಗರ, `ಕೇಂದ್ರ ಸರ್ಕಾರ ಕಂಪೆನಿ ಸಂಸ್ಕೃತಿ ಪೋಷಿಸುವ ಭರದಲ್ಲಿ ದೇಶದ ಅರ್ಥ ವ್ಯವಸ್ಥೆಗೆ ಭದ್ರ ಬುನಾದಿ ಹಾಕಿಕೊಟ್ಟಿರುವ ಸಹಕಾರಿ ಸಂಸ್ಕೃತಿಯನ್ನೇ ಮುಗಿಸಲು ಹೊರಟಿದೆ. ಸಹಕಾರಿ ರಂಗಕ್ಕೆ ಉತ್ತೇಜನ ನೀಡಬೇಕಾದ ಸರ್ಕಾರವೇ ಮಾರಕ ನೀತಿ ರೂಪಿಸಿರುವುದು ಸರಿಯಲ್ಲ~ ಎಂದು ಆಕ್ಷೇಪಿಸಿದರು.
ಸಮಾವೇಶ ಉದ್ಘಾಟಿಸಿದ ಸಂಸದ ನಳಿನ್ ಕುಮಾರ್ ಕಟೀಲ್, `ನೇರ ತೆರಿಗೆ ಸಂಹಿತೆ ಮೂಲಕ ಸಹಕಾರಿ ಸಂಸ್ಥೆಗಳ ಆದಾಯಕ್ಕೆ ತೆರಿಗೆ ವಿಧಿಸಲು ಮುಂದಾಗಿರುವ ಕೇಂದ್ರ ಸರ್ಕಾರ, ಸಹಕಾರಿ ರಂಗಕ್ಕೆ ಕೊಡಲಿ ಪೆಟ್ಟು ಹಾಕುತ್ತಿದೆ. ಕೃಷಿ ದೇಶದ ಬೆನ್ನೆಲುಬು.
ಕೃಷಿ ಉಳಿವಿಗೆ ಸಹಕಾರಿ ಸಂಸ್ಥೆಗಳ ಕೊಡುಗೆ ಮಹತ್ತರ. ಇಂಥ ಸಂಸ್ಥೆಗಳ ಆದಾಯಕ್ಕೂ ತೆರಿಗೆ ವಿಧಿಸಿದರೆ ಕೃಷಿ ಮೇಲೆ ಪ್ರತಿಕೂಲ ಪರಿಣಾಮವಾಗದೆ.
`ರೈತರನ್ನು ಉಳಿಸಬೇಕಾದರೆ ಸಹಕಾರಿ ರಂಗವನ್ನು ಸದೃಢಗೊಳಿಸಬೇಕು. ಈ ಬಗ್ಗೆ ಸಂಸತ್ತಿನಲ್ಲಿ ಗಮನ ಸೆಳೆಯುವೆ~ ಎಂದರು.ಕರ್ನಾಟಕ ಸೌಹಾರ್ದ ಸಹಕಾರಿ, ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟ, ಪುತ್ತೂರು ಆದರ್ಶ ಕ್ರೆಡಿಟ್ ಸಹಕಾರಿ ಸಂಘ, ಮೂಡುಬಿದರೆ ಸಿ.ಎ. ಬ್ಯಾಂಕ್, ಅಭ್ಯುದಯ ಮಹಿಳಾ ಸೌಹಾರ್ದ ಸಹಕಾರಿ, ದ.ಕ. ಜಿಲ್ಲಾ ಸಹಕಾರಿ ಯೂನಿಯನ್, ಗೋಕರ್ಣನಾಥ ಸಹಕಾರಿ ಬ್ಯಾಂಕ್, ವಿಶ್ವಕರ್ಮ ಸಹಕಾರಿ ಬ್ಯಾಂಕ್ ಮತ್ತಿತರ ಸಹಕಾರಿ ಸಂಘಟನೆಗಳು ಸಮಾವೇಶದಲ್ಲಿ ಭಾಗವಹಿಸಿದ್ದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.