ADVERTISEMENT

ಮಂತ್ರಾಲಯದಲ್ಲಿ ವಸತಿಗೆ ಭಕ್ತರ ಪರದಾಟ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2012, 18:35 IST
Last Updated 2 ಆಗಸ್ಟ್ 2012, 18:35 IST

ರಾಯಚೂರು: ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ 341ನೇ ಆರಾಧನಾ ಮಹೋತ್ಸವದ 2ನೇ ದಿನವಾದ ಗುರುವಾರ ಋಗ್ವೇದ, ಯಜುರ್ವೇದ, ನಿತ್ಯ ಉಪಾಕರ್ಮ, ಶಾಖೋತ್ಸವ, ರಜತ ಮಂಟಪೋತ್ಸವ ಕಾರ್ಯಕ್ರಮ ನಡೆದವು.

ರಾಯರ ಆರಾಧನಾ ಮಹೋತ್ಸವದ ಪೂರ್ವಾರಾಧನೆ 3ರಂದು ನಡೆಯಲಿದ್ದು, 4ರಂದು ಮಧ್ಯಾರಾಧನೆ ನಡೆಯಲಿದೆ. ಉತ್ತರಾರಾಧನೆ 5ರಂದು ಜರುಗಲಿದೆ. ಹೀಗಾಗಿ ಆರಾಧನಾ ಮಹೋತ್ಸವಕ್ಕೆ ಹೆಚ್ಚಿನ ಸಂಖ್ಯೆಯ  ಭಕ್ತರು ಮಂತ್ರಾಲಯಕ್ಕೆ ಧಾವಿಸುತ್ತಿದ್ದಾರೆ.

ಭಕ್ತರ ಮಹಾಪೂರದಿಂದಾಗಿ ಮಂತ್ರಾಲಯದಲ್ಲಿ ವಸತಿ ಸಮಸ್ಯೆ ಈ ವರ್ಷವೂ ಹೆಚ್ಚಾಗಿದೆ. ಭಕ್ತರು ಕೊಠಡಿಗಾಗಿ ಪರದಾಡುತ್ತಿದ್ದಾರೆ. ಮಠದ ವಸತಿಗೃಹಗಳು ಭರ್ತಿಯಾಗಿದ್ದು, ದಾನಿಗಳೇ ಹೆಚ್ಚು ಕೊಠಡಿ ಪಡೆದಿದ್ದಾರೆ ಎಂದು ಶ್ರೀಮಠದ ಮೂಲಗಳು ತಿಳಿಸಿವೆ.

ಶ್ರೀಮಠದ್ದೇ 700ಕ್ಕೂ ಹೆಚ್ಚು ಕೊಠಡಿಗಳಿವೆ. ಕೊಠಡಿ ನಿರ್ಮಿಸಿಕೊಟ್ಟ ದಾನಿಗಳ ಕುಟುಂಬ ವರ್ಗಕ್ಕೆ ವರ್ಷದ 60 ದಿನ ಕೊಠಡಿ ದೊರಕಿಸುವ ಒಪ್ಪಂದವಿದೆ. ಹೀಗಾಗಿ ಆರಾಧನೆ ಸಂದರ್ಭದಲ್ಲಿ, ರಜೆ ಅವಧಿಯಲ್ಲಿ ಅವರು ಕೊಠಡಿ ಪಡೆಯುತ್ತಾರೆ. ಭಕ್ತರು ಸಹಕರಿಸಬೇಕು ಎಂದು ಶ್ರೀಮಠ ತನ್ನ ಅಸಹಾಯಕತೆ ವ್ಯಕ್ತಪಡಿಸುತ್ತದೆ."

ಖಾಸಗಿ ಹೋಟೆಲ್, ವಸತಿಗೃಹಗಳು ದರಗಳನ್ನು ಮೂರು ಪಟ್ಟು ಹೆಚ್ಚಿಸಿವೆ. ಹೀಗಾಗಿ ಭಕ್ತರಿಗೆ ಪ್ರತಿ ವರ್ಷದಂತೆ ಈ ವರ್ಷವೂ ಮಠದ ಪ್ರಾಕಾರವೇ ಗತಿಯಾಗಲಿದೆ.

ಭಕ್ತರ ಅನುಕೂಲಕ್ಕೆ ಕುಡಿಯವ ನೀರಿನ ವ್ಯವಸ್ಥೆ, 24 ತಾಸು ವೈದ್ಯಕೀಯ ಚಿಕಿತ್ಸಾ ವ್ಯವಸ್ಥೆ,  ಪರಿಮಳ ಪ್ರಸಾದದ ಪೊಟ್ಟಣ ಪ್ರತಿನಿತ್ಯ 1 ಲಕ್ಷ ಭಕ್ತರಿಗೆ ವಿತರಣೆಗೆ ಸಿದ್ಧಪಡಿಸಲಾಗುತ್ತಿದೆ. ಆರಾಧನಾ ಮಹೋತ್ಸವಕ್ಕೆ ಬರುವ ಭಕ್ತರಿಗೆ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗುತ್ತಿದ್ದು, ಈ ಬಾರಿ ಅನ್ನಪೂರ್ಣ ಭೋಜನ ಶಾಲೆಯಲ್ಲಿಯೇ ನಿತ್ಯ ಲಕ್ಷಕ್ಕೂ ಹೆಚ್ಚು ಭಕ್ತರಿಗೆ ಪ್ರಸಾದ ನಡೆಯಲಿದೆ ಎಂದು ಶ್ರೀಮಠದ ಮೂಲಗಳು ತಿಳಿಸಿವೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.