ನರಗುಂದ (ಗದಗ ಜಿಲ್ಲೆ): ಅಕ್ರಮ ಚಟುವಟಿಕೆಗಳಿಗೆ ಮಕ್ಕಳನ್ನು ಬಳಸಿಕೊಳ್ಳುತ್ತಿದ್ದ ಆರೋಪದ ಮೇಲೆ ಇಲ್ಲಿನ ನೀರಾವರಿ ಇಲಾಖೆ ಕಾವಲುಗಾರ ಲಕ್ಷಣ ಬೆಲೀಫ್, ಆತನ ಪತ್ನಿ ಕಸ್ತೂರಿಯನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಅಲ್ಲದೇ, ಇವರ ಒಬ್ಬ ಮಗನನ್ನು ಧಾರವಾಡದ ಬಾಲನ್ಯಾಯ ಮಂಡಳಿ ಎದುರು ಹಾಜರುಪಡಿಸಲು ಕರೆದೊಯ್ದಿದ್ದಾರೆ.
ಇಲ್ಲಿನ ನೀರಾವರಿ ಕಾಲೊನಿಯಲ್ಲಿ ಶೆಡ್ನಲ್ಲಿ ವಾಸವಿರುವ ಲಕ್ಷ್ಮಣ ಬೆಲೀಫ್ ಮನೆಯ ಮೇಲೆ ಶುಕ್ರವಾರ ದಾಳಿ ನಡೆಸಿದ್ದ ಪೊಲೀಸರು ಹಾಗೂ ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿ ಭಾರತಿ ಶೆಟ್ಟರ್, ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಆರು ಮಕ್ಕಳನ್ನು ರಕ್ಷಿಸಿದ್ದರು.
ಹಲವಾರು ವರ್ಷಗಳಿಂದ ಸರಕಾರಿ ನೌಕರನಾಗಿ ಸೇವೆ ಸಲ್ಲಿಸುತ್ತಿರುವ ಲಕ್ಷ್ಮಣ ಹಾಗೂ ಆತನ ಪತ್ನಿಯನ್ನು ತಮ್ಮ ಮಗಳನ್ನು ಅಕ್ರಮ ಕೆಲಸಕ್ಕೆ ಬಳಸಿಕೊಂಡಿರುವ ಆರೋಪದ ಮೇಲೆ ಬಂಧಿಸಲಾಯಿತು ಎಂದು ಪಾಟೀಲ ತಿಳಿಸಿದರು.
ಲಕ್ಷ್ಮಣನ 16 ವರ್ಷದ ಪುತ್ರಿ 15 ದಿನಗಳ ಹಿಂದೆ ಮಗುವಿಗೆ ಜನ್ಮ ನೀಡಿದ್ದಳು. ಗರ್ಭ ಧರಿಸಲು ತಾನೇ ಕಾರಣ ಎಂದು ಆಕೆಯ ತಮ್ಮ (15 ವರ್ಷ) ಶನಿವಾರ ತಪ್ಪೊಪ್ಪಿಕೊಂಡಿದ್ದಾನೆ. ಹೀಗಾಗಿ ಅವನನ್ನು ಬಾಲನ್ಯಾಯ ಮಂಡಳಿ ಎದುರು ಹಾಜರುಪಡಿಸಲು ಧಾರವಾಡಕ್ಕೆ ಕಳುಹಿಸಲಾಗಿದೆ ಎಂದು ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.