ಬಳ್ಳಾರಿ: ಬೋನಿನಲ್ಲಿದ್ದ ಹುಲಿಗೆ ಚಾಕೋಲೇಟ್ ತಿನ್ನಿಸಲು ಮುಂದಾದ ಮಗುವಿನ ಕೈಯನ್ನು ಹುಲಿ ತಿಂದು ಹಾಕಿರುವ ಘಟನೆ ನಗರದ ರೇಡಿಯೋ ಪಾರ್ಕ್ ಬಳಿಯ ಪ್ರಾಣಿ ಸಂಗ್ರಹಾಲಯದಲ್ಲಿ ಸೋಮವಾರ ಸಂಜೆ ಸಂಭವಿಸಿದೆ.
ರಾಮನಗರ ಜಿಲ್ಲೆಯ ಚನ್ನಪಟ್ಟಣದ ನಾಗಬಾಬು ಎಂಬುವವರ ಮಗ ನಿಖಿಲ್ನ (ಎರಡೂವರೆ ವರ್ಷ) ಎಡಗೈಯನ್ನು ಹುಲಿಯು ಕಿತ್ತು ತಿಂದಿದೆ. ಮಗುವನ್ನು ಸ್ಥಳೀಯ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ವಿಮ್ಸ) ಆಸ್ಪತ್ರೆಗೆ ದಾಖಲಿಸಲಾಗಿದೆ.
ಚನ್ನಪಟ್ಟಣದಿಂದ ಬಳ್ಳಾರಿ ಹೊರ ವಲಯದಲ್ಲಿರುವ ಬತ್ರಿ ಗ್ರಾಮಕ್ಕೆ ಬಂದಿದ್ದ ನಿಖಿಲ್, ಸಂಜೆ ಅಜ್ಜಿ ಬಾಲಮಣಿ ಅವರೊಂದಿಗೆ ಪ್ರಾಣಿ ಸಂಗ್ರಹಾಲಯ ವೀಕ್ಷಣೆಗೆ ತೆರಳಿದ್ದ.
ಮೊದಲು ಹುಲಿಯಿದ್ದ ಜಾಗೆ ವೀಕ್ಷಿಸಿ ನಂತರ ಪಕ್ಕದಲ್ಲಿದ್ದ ಜಿಂಕೆಗಳನ್ನು ವೀಕ್ಷಿಸುತ್ತಿದ್ದ ಸಂದರ್ಭ ಅಜ್ಜಿಯ ಗಮನಕ್ಕೆ ಬಾರದಂತೆಯೇ 5.30ರ ಹೊತ್ತಿಗೆ ಹುಲಿಯ ಬಳಿ ತೆರಳಿದ ಮಗು, ವಿಶಾಲವಾದ ಬೋನಿನೊಳಗೆ ಎಡಗೈ ಇರಿಸಿ, ಚಾಕೋಲೇಟ್ ನೀಡಲು ಮುಂದಾದಾಗ ಈ ಘಟನೆ ನಡೆದಿದೆ. ಹುಲಿಯ ಬೋನಿನ ಸಮೀಪ ಚಿಕ್ಕಮಕ್ಕಳು ಸುಲಭವಾಗಿ ಹೋಗಲು ಅವಕಾಶ ಇರುವುದರಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೌಲ್ಬಝಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.