ಬೆಂಗಳೂರು: ‘ರಾಜ್ಯಸಭಾ ಚುನಾವಣೆಯ ಮತದಾನ ಬಹಿಷ್ಕರಿಸಲು ಜೆಡಿಎಸ್ನ 28 ಶಾಸಕರು ನಿರ್ಧರಿಸಿದ್ದೇವೆ’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ಅವರು ಹೇಳಿದರು.
‘ಚುನಾವಣಾ ಪ್ರಕ್ರಿಯೆ ರದ್ದುಗೊಳಿಸಬೇಕು ಹಾಗೂ ಚುನಾವಣಾಧಿಕಾರಿ ಎಸ್. ಮೂರ್ತಿ ವಿರುದ್ಧ ಕ್ರಮ ಜರುಗಿಸುವಂತೆ ಕೋರಿ ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಲಾಗಿದೆ’ ಎಂದು ಅವರು ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದರು.
‘ಎರಡನೇ ಬಾರಿ ಮತ ಹಾಕಲು ಅವಕಾಶ ನೀಡುವ ಮೂಲಕ ಚುನಾವಣಾ ಅಕ್ರಮ ನಡೆಯುವಾಗ ಅಲ್ಲಿಯೇ ಇದ್ದ ಚುನಾವಣಾ ವೀಕ್ಷಕರಾದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವಕುಮಾರ್ ಪಾತ್ರ ಇದರಲ್ಲಿ ಏನು ಎಂಬುದು ಬಯಲಾಗಬೇಕು. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಸಂಜೀವಕುಮಾರ್ ಹಿಂದೆ ಸರ್ಕಾರದ ಪರವಾಗಿ ಕೆಲಸ ಮಾಡಿದ್ದರು.
ಗೆಜೆಟೆಡ್ ಪ್ರೊಬೆಷನರಿ ಹುದ್ದೆಗೆ ಆಯ್ಕೆಯಾಗಿದ್ದ 392 ಅಭ್ಯರ್ಥಿಗಳನ್ನು ಬೀದಿ ಪಾಲು ಮಾಡಿದ್ದರು. ಚುನಾವಣಾ ಆಯೋಗಕ್ಕೆ ಹೋದ ಮೇಲೂ ಕಾಂಗ್ರೆಸ್ ಸರ್ಕಾರದ ಪರ ವರ್ತಿಸುತ್ತಿರುವುದು ಈ ಪ್ರಕರಣ ಸಾಕ್ಷಿ’ ಎಂದು ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.