ಬೆಂಗಳೂರು: ‘ಚನ್ನರಾಯಪಟ್ಟಣದಲ್ಲಿ ಎಂಎಸ್ಐಎಲ್ (ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್) ಮದ್ಯದಂಗಡಿ ತೆರೆಯಬೇಕು’ ಎಂದು ಶ್ರವಣಬೆಳಗೊಳ ಕ್ಷೇತ್ರದ ಜೆಡಿಎಸ್ ಶಾಸಕ ಸಿ.ಎನ್. ಬಾಲಕೃಷ್ಣ ಒತ್ತಾಯಿಸಿದರು.
ವಿಧಾನಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಅವರು ಈ ಬೇಡಿಕೆ ಮಂಡಿಸಿದರು. ಆಗ ಮುಖ್ಯಮಂತ್ರಿ ಸಿದ್ದರಾಮಯ್ಯ ಜೋರಾಗಿ ನಕ್ಕರು.
‘ಎಂಎಸ್ಐಎಲ್ ಮೂಲಕ ಸಿಎಲ್ 2 ಮದ್ಯದಂಗಡಿಗಳನ್ನು ತೆರೆಯಲು ಅವಕಾಶ ಇದೆ. ಇದಕ್ಕೆ ಕೆಲವು ಶಾಸಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಶಾಸಕರು ಕೇಳಿದ ಕಡೆಗಳಲ್ಲಿ ತೆರೆಯಲು ಸಿದ್ಧವಿದ್ದೇವೆ. ನಿಮ್ಮೂರಲ್ಲೂ ಆರಂಭಿಸುತ್ತೇವೆ’ ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.
‘ಮೂರು ವರ್ಷಗಳಲ್ಲಿ ಹೊರದೇಶಗಳಿಂದ 2.63 ಲಕ್ಷ ಪೆಟ್ಟಿಗೆ ಹಾಗೂ ಹೊರರಾಜ್ಯಗಳಿಂದ 1.10 ಕೋಟಿ ಪೆಟ್ಟಿಗೆ ಮದ್ಯ ತರಿಸಿಕೊಳ್ಳಲಾಗಿದೆ. ಹೊರದೇಶಗಳಿಗೆ 1.83 ಲಕ್ಷ ಪೆಟ್ಟಿಗೆ ಹಾಗೂ ಹೊರರಾಜ್ಯಗಳಿಗೆ 78.16 ಲಕ್ಷ ಪೆಟ್ಟಿಗೆ ಮದ್ಯ ಕಳುಹಿಸಲಾಗಿದೆ’ ಎಂದರು.