ADVERTISEMENT

ಮಧ್ಯವರ್ತಿಗಳ ಹಾವಳಿಯಿಂದ ಮುಕ್ತಿ: 31ರಂದು ರೈತರ ಕಂಪೆನಿ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2011, 19:30 IST
Last Updated 20 ಜನವರಿ 2011, 19:30 IST

ಮೈಸೂರು: ಮಧ್ಯವರ್ತಿಗಳ ಹಾವಳಿ, ಬೆಲೆ ಕುಸಿತ, ಆತ್ಮಹತ್ಯೆ ಮುಂತಾದವುಗಳಿಂದ ನೊಂದಿರುವ  ರೈತರೇ ಈಗ ಖಾಸಗಿ ಕಂಪೆನಿಯೊಂದನ್ನು ಸ್ಥಾಪಿಸಿಕೊಂಡಿದ್ದು ಅದು ಜ.31ರಂದು ಉದ್ಘಾಟನೆಯಾಗಲಿದೆ.

ಇಲ್ಲಿನ ರೈತರು ರೈತರಿಂದ ರೈತರಿಗಾಗಿಯೇ ‘ಬಾನುಲಿ ಕೃಷಿಕರ ಕಂಪೆನಿ’ ಎಂಬ ಖಾಸಗಿ ಲಿಮಿಟೆಡ್  ಕಂಪೆನಿ ಸ್ಥಾಪಿಸಿದ್ದಾರೆ. ಈ ಸಂಸ್ಥೆಯ ಉಗಮಕ್ಕೆ ಕಾರಣವಾದದ್ದು ಆಕಾಶವಾಣಿ ಮೈಸೂರು. ಆಕಾಶವಾಣಿಯಲ್ಲಿ ಪ್ರಸಾರವಾಗುತ್ತಿದ್ದ ಬಾನುಲಿ ಕೃಷಿ ಬೆಳಗು ಇಂಥ ವಿಶಿಷ್ಟ ಕಂಪೆನಿಯನ್ನು ಹುಟ್ಟುಹಾಕಲು ಸ್ಫೂರ್ತಿ ನೀಡಿತು.

ಕಂಪೆನಿಯ ಅಧ್ಯಕ್ಷರಾಗಿ ಮಂಡ್ಯದ ರಾಮಚಂದ್ರ, ವ್ಯವಸ್ಥಾಪಕ ನಿರ್ದೇಶಕರಾಗಿ ಜಿ.ಬಿ.ಸರಗೂರಿನ ವೆಂಕಟೇಶ್ ಕಾರ್ಯ ನಿರ್ವಹಿಸುತ್ತಿದ್ದಾರೆ. ನಿರ್ದೇಶಕ ಮಂಡಳಿಯಲ್ಲಿ 13 ಮಂದಿ ನಿರ್ದೇಶಕರಿದ್ದಾರೆ. ರೈತರೇ ಷೇರುಗಳನ್ನು ಹೂಡಿ ಕಂಪೆನಿಯನ್ನು ಮುನ್ನಡೆಸುತ್ತಿದ್ದಾರೆ.

ADVERTISEMENT

ಯೋಜನೆಗಳು: ಮಾರುಕಟ್ಟೆ ವ್ಯವಸ್ಥೆ ಸುಧಾರಣೆ, ಜೈವಿಕ ಇಂಧನ ಉತ್ಪನ್ನ ಘಟಕ ಸ್ಥಾಪನೆ (ಹೊಂಗೆ, ಬೇವು, ಹಿಪ್ಪೆ ಇತ್ಯಾದಿ), ರೈತರ ಸ್ವಾವಲಂಬನೆ, ರೈತರ ಆರ್ಥಿಕ ಸುಧಾರಣೆ ಮುಂತಾದ ಯೋಜನೆಗಳನ್ನು ಕಂಪೆನಿ ಹಾಕಿಕೊಂಡಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ವೆಂಕಟೇಶ್ ತಿಳಿಸಿದರು. ಹೆಚ್ಚಿನ ಮಾಹಿತಿಗೆ 9945290334 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.