ADVERTISEMENT

ಮನೆಯ ಹಿತ್ತಿಲಿನಲ್ಲೇ ಶವಸಂಸ್ಕಾರ

ಬೇಲೂರು ತಾಲ್ಲೂಕಿನ ದಬ್ಬೆ ಗ್ರಾಮದಲ್ಲಿ ಸ್ಮಶಾನ ಒತ್ತುವರಿ

ಪ್ರಜಾವಾಣಿ ವಿಶೇಷ
Published 2 ಮೇ 2014, 19:30 IST
Last Updated 2 ಮೇ 2014, 19:30 IST
ಬೇಲೂರು ತಾಲ್ಲೂಕು ದಬ್ಬೆ ಗ್ರಾಮದಲ್ಲಿ ಶವ ಹೂಳಲು ಸ್ಮಶಾನ ಇಲ್ಲದ ಕಾರಣ ನಿಂಗಮ್ಮ ಎಂಬುವವರ ಶವವನ್ನು ಮನೆಯ ಹಿತ್ತಲಿನಲ್ಲಿಯೇ ಹೂತಿರುವುದು. ಮೃತ ನಿಂಗಮ್ಮ (ಒಳ ಚಿತ್ರ)
ಬೇಲೂರು ತಾಲ್ಲೂಕು ದಬ್ಬೆ ಗ್ರಾಮದಲ್ಲಿ ಶವ ಹೂಳಲು ಸ್ಮಶಾನ ಇಲ್ಲದ ಕಾರಣ ನಿಂಗಮ್ಮ ಎಂಬುವವರ ಶವವನ್ನು ಮನೆಯ ಹಿತ್ತಲಿನಲ್ಲಿಯೇ ಹೂತಿರುವುದು. ಮೃತ ನಿಂಗಮ್ಮ (ಒಳ ಚಿತ್ರ)   

ಬೇಲೂರು: ತಾಯಿ ಸತ್ತ ದುಃಖ ಒಂದೆಡೆ­ಯಾದರೆ, ಆ ಶವವನ್ನು ಹೂಳಲು ಗ್ರಾಮದಲ್ಲಿ ಸ್ಮಶಾನ ಇಲ್ಲ. ಇರುವ ಸ್ಮಶಾನದ ಜಾಗವನ್ನು ಬಲಾಢ್ಯರು ಒತ್ತುವರಿ ಮಾಡಿದ್ದಾರೆ. ಶವವನ್ನು ಸಂಸ್ಕಾರ ಮಾಡುವುದು ಎಲ್ಲಿ ಎಂಬ ಚಿಂತೆ ಪುತ್ರನದು. ಕೆರೆಯ ದಡದಲ್ಲಿ ಶವ ಹೂಳುತ್ತೇವೆ ಎಂದರೆ ಅದಕ್ಕೆ ಕೆಲವರ ಅಡ್ಡಿ. ಹೀಗೆ ವಿಧಿಯಿಲ್ಲದೆ ಮನೆಯ ಹಿತ್ತಿಲಲ್ಲೇ ತಾಯಿಯ ಶವವನ್ನು ಹೂತು ಸಂಸ್ಕಾರ ಮಾಡಿದ ಘಟನೆ ತಾಲ್ಲೂಕಿನ ದಬ್ಬೆ ಗ್ರಾಮದಲ್ಲಿ ಈಚೆಗೆ ನಡೆದಿರು­ವುದು ತಡವಾಗಿ ಬೆಳಕಿಗೆ ಬಂದಿದೆ.

ದಬ್ಬೆ ಗ್ರಾಮದ ಕೃಷ್ಣಾಚಾರ್‌ ಅವರ ಪತ್ನಿ ನಿಂಗಮ್ಮ (80) ಏಪ್ರಿಲ್‌ 21ರಂದು ನಿಧನರಾದರು. ನಿಂಗಮ್ಮ ಅವರ ಪುತ್ರ ಅಚ್ಯುತಾಚಾರ್‌, ಸೊಸೆ ಪದ್ಮಾವತಿ ಮತ್ತು ಬಂಧುಗಳಿಗೆ ಸಾವಿನ ದುಃಖ ಒಂದೆಡೆಯಾದರೆ, ಶವವನ್ನು ಹೂಳಲು ಜಾಗವಿಲ್ಲ ಎಂಬ ಕೊರಗು ಮತ್ತೊಂದೆಡೆ. ನಿಂಗಮ್ಮ ಅವರ ಪತಿ ಕೃಷ್ಣಾಚಾರ್‌ ಮೃತ­ಪಟ್ಟಾಗ ಗ್ರಾಮದ ಕೆರೆಯ ದಡದಲ್ಲಿ ಶವ ಹೂಳಲಾಗಿತ್ತು. ಆದರೆ, ನಿಂಗಮ್ಮ ಅವರ ಶವವನ್ನು ಕೆರೆಯ ದಡದ­ಲ್ಲಿಯೇ ಹೂಳುತ್ತೇವೆ ಎಂದಾಗ ಗ್ರಾಮದ ಕೆಲವರು ಹೂಳ­ಬೇಡಿ ಎಂದು ತಾಕೀತು ಮಾಡಿದರು.

‘ಗ್ರಾಮದಲ್ಲಿ ಸ್ಮಶಾನ ಇಲ್ಲ, ಶವ ಹೂಳುವುದು ಎಲ್ಲಿ ಎಂದು ಅವರನ್ನೇ ಪ್ರಶ್ನಿಸಿದರೆ ನಿಮ್ಮ ಮನೆಯ ಪಕ್ಕದ­ಲ್ಲಿಯೇ ಹೂಳಿರಿ’ ಎಂಬ ಉತ್ತರ ಅವ­ರಿಂದ ಬಂತು. ಬೇರೆಡೆ ಜಾಗ ದೊರೆ­ಯದ ಕಾರಣ ಕುಟುಂಬ ವರ್ಗದವರು ವಿಧಿಯಿಲ್ಲದೆ ನಿಂಗಮ್ಮ ಅವರ ಅಂತ್ಯ­ಸಂಸ್ಕಾರವನ್ನು ಮನೆಯ ಹಿತ್ತಲಿನ­ಲ್ಲಿಯೇ ನೆರವೇರಿಸಿದರು. ಮನೆಯ ಹಿತ್ತಲಿನಲ್ಲಿ ಶವ ಹೂಳಲು ಅಕ್ಕಪಕ್ಕದ ಮನೆಯವರು ಆಕ್ಷೇಪ ವ್ಯಕ್ತಪಡಿಸಿ­ದರಾದರೂ ಪರಿಸ್ಥಿತಿಯನ್ನು ಅರಿತು ಒಪ್ಪಿಗೆ ನೀಡಿದ್ದಾರೆ.

ಬೇಲೂರು ತಾಲ್ಲೂಕಿನ ಮಲೆನಾಡು ಭಾಗದಲ್ಲಿರುವ ದಬ್ಬೆ, ಸುಮಾರು 80 ಮನೆ ಮತ್ತು 600 ಜನಸಂಖ್ಯೆಯುಳ್ಳ ಪುಟ್ಟ ಗ್ರಾಮ. ಈ ಗ್ರಾಮದಲ್ಲಿ ಸ್ಥಿತಿ­ವಂತರು ಸಾಕಷ್ಟು ಸಂಖ್ಯೆಯಲ್ಲಿದ್ದರೂ ಅಷ್ಟೇ ಪ್ರಮಾಣ­ದಲ್ಲಿ ಕೂಲಿ ಕಾರ್ಮಿಕ­ರಿದ್ದಾರೆ. ಜನರು ಸಾವನ್ನಪ್ಪಿದಾಗ ಸ್ಥಿತಿ­ವಂತರು ತಮ್ಮ ಜಮೀನು ಮತ್ತು ಕಾಫಿ ತೋಟಗಳಲ್ಲಿ ಅಂತ್ಯಸಂಸ್ಕಾರ ನೆರವೇರಿ­ಸು­ತ್ತಾರೆ. ಗ್ರಾಮ­ದಲ್ಲಿ ಹಾದು ಹೋಗಿ­ರುವ ಯಗಚಿ ನದಿಯ ದಡದಲ್ಲಿ ಸ್ಮಶಾನ­ವಿದೆಯಾದರೂ ಅದು ಪಾಳು ಬಿದ್ದು ಅಲ್ಲಿಗೆ ತೆರಳಲು ಸಾಧ್ಯ­ವಾಗುತ್ತಿಲ್ಲ.

ಕರ್ಕಿಹಳ್ಳಿ ಮತ್ತು ದಬ್ಬೆ ಗ್ರಾಮದ ತಿರುವಿನಲ್ಲಿ ಹಿಂದುಳಿದ ವರ್ಗದ ಜನರಿ­ಗೆಂದು ಸುಮಾರು 1.5 ಎಕರೆ ಸ್ಮಶಾನದ ಜಾಗವಿದೆ. ಈ ಹಿಂದೆ ಅಲ್ಲಿ ಅಂತ್ಯ­ಸಂಸ್ಕಾರ ನಡೆಸಲಾಗುತ್ತಿತ್ತು. ಬಲಾಢ್ಯ ವ್ಯಕ್ತಿಯೊಬ್ಬರು ಆ ಜಾಗ­ವನ್ನು ಒತ್ತುವರಿ ಮಾಡಿ ಬೇಲಿ ಹಾಕಿ­ಕೊಂಡು ಕಾಫಿ ತೋಟ ನಿರ್ಮಿಸಿ­ಕೊಂಡಿದ್ದಾರೆ. ಇದರಿಂ­ದಾಗಿ ಸುಮಾರು ಹಿಂದುಳಿದ ವರ್ಗಕ್ಕೆ ಸೇರಿದ 25 ಕುಟುಂಬಗಳಿಗೆ ಶವ ಹೂಳಲು ಜಾಗವಿಲ್ಲದಂತಾಗಿದೆ. ಕಂದಾಯ ಇಲಾಖೆಯ ಅಧಿಕಾರಿಗಳು ಒತ್ತುವರಿ­ಯಾದ ಸ್ಮಶಾನದ ಜಾಗವ­ನ್ನು ಬಿಡಿಸಿಕೊಡಲು ಮುಂದಾಗಿಲ್ಲ.

ನಿಂಗಮ್ಮ ಅವರ ಪುತ್ರ ಅಚ್ಯುತಾಚಾರ್‌ ಹಲವು ದಿನಗಳಿಂದ ಅನಾರೋಗ್ಯಕ್ಕೊಳಗಾಗಿದ್ದಾರೆ. ತಾಯಿ ಸತ್ತ ನಂತರ ಹಾಸಿಗೆ ಹಿಡಿದಿದ್ದಾರೆ. ತಾಯಿಯ ಅಂತ್ಯಕ್ರಿಯೆಗೆ ಸೂಕ್ತ ಸ್ಥಳ ದೊರಕಲಿಲ್ಲವಲ್ಲ ಎಂಬ ಕೊರಗು ಅವರನ್ನು ಕಾಡುತ್ತಿದೆ. ಅನಾರೋಗ್ಯ­ದಿಂದ ಬಳಲುತ್ತಿದ್ದು ಸಾವನ್ನಪ್ಪಿದರೆ, ಅಂತ್ಯಸಂಸ್ಕಾರಕ್ಕೆ ಆರಡಿ–ಮೂರಡಿ ಜಾಗ­­ವಿಲ್ಲವಲ್ಲ. ಪತ್ನಿ ಮತ್ತು ಬಂಧುಗಳು ಜಾಗಕ್ಕಾಗಿ ಎಲ್ಲಿ ಪರದಾ­ಡುತ್ತಾರೆ ಎಂಬ ಚಿಂತೆ ಅವರನ್ನು ಕಾಡುತ್ತಿದೆ ಎಂದು ಅವರ ಪತ್ನಿ ಪದ್ಮಾವತಿ ‘ಪ್ರಜಾವಾಣಿ’ ಬಳಿ ತಮ್ಮ ಅಳಲನ್ನು ತೋಡಿಕೊಂಡರು.

ಘಟನೆ ನಡೆದು 10 ದಿನ ಕಳೆದಿದೆ­ಯಾದರೂ, ಶುಕ್ರವಾರ ಮೃತ ನಿಂಗಮ್ಮ  ಅವರ ವೈಕುಂಠ ಸಮಾರಾಧನೆ ಇದ್ದ ಕಾರಣ ಘಟನೆ ಬೆಳಕಿಗೆ ಬಂದಿದೆ.

ತೆರವುಗೊಳಿಸಲಿ
ಬೇಲೂರು: ದಬ್ಬೆ ಗ್ರಾಮದಲ್ಲಿನ ಸ್ಮಶಾನಕ್ಕೆ ಮೀಸಲಿಟ್ಟಿದ್ದ ಜಾಗ 1.5 ಎಕರೆಯಷ್ಟು ಜಮೀನು ಒತ್ತು­ವರಿಯಾಗಿದೆ. ಪಹಣಿಯಲ್ಲಿ ಈಗಲೂ ಸ್ಮಶಾನದ ಜಾಗ ಎಂದು ನಮೂದಾಗುತ್ತಿದೆ. ಜಾಗ ಒತ್ತು­ವರಿಯಾಗಿರುವುದರಿಂದ ಸುಮಾರು 25ರಿಂದ 30 ಕುಟುಂಬ­ಗಳಿಗೆ ಶವ ಸಂಸ್ಕಾರಕ್ಕೆ ಜಾಗವಿಲ್ಲದಂತಾಗಿದೆ. ಕಂದಾಯ ಇಲಾಖೆಯ ಅಧಿಕಾರಿಗಳು ಸ್ಮಶಾ­ನದ ಜಾಗವನ್ನು ಬಿಡಿಸಿಕೊಟ್ಟು ಅಂತ್ಯ ಸಂಸ್ಕಾರಕ್ಕೆ ಅವಕಾಶ ಮಾಡಿಕೊಡಬೇಕು.
– ಲಕ್ಷ್ಮಣ್‌, ದಬ್ಬೆ ಗ್ರಾಮಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT