ಉಡುಪಿ: ಭೂಮಿ ಕಂಪಿಸಿದೆ ಎಂಬ ಸುದ್ದಿ ಉಡುಪಿ ನಗರದಲ್ಲಿ ಬುಧವಾರ ಮಧ್ಯಾಹ್ನ ಹಬ್ಬಿದ್ದರಿಂದ ಜನರು ಕೆಲ ಕಾಲ ಆತಂಕಕ್ಕೆ ಒಳಗಾದರು. ಮಣಿಪಾಲದಲ್ಲಿ ಭೂಮಿ ಕಂಪಿಸಿದೆ ಎಂದು ಕೆಲವರು ಸುದ್ದಿ ಹಬ್ಬಿಸಿದ್ದರು. ಆದರೆ ಈ ಭೂ ಕಂಪನದ ಬಗ್ಗೆ ಯಾವುದೇ ವರದಿಯಾಗಿಲ್ಲ. ಆದರೆ ಎಚ್ಚರಿಕೆಯಿಂದಿರುವಂತೆ ಸೂಚನೆ ಬಂದಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಸ್ಪಷ್ಟಪಡಿಸಿದೆ.
ಬೆಂಗಳೂರಿನಲ್ಲಿ ಭೂಮಿ ಕಂಪಿಸಿದ ಸುದ್ದಿಗಳು ಪ್ರಸಾರವಾಗುತ್ತಿದ್ದಂತೆ ಮಲ್ಪೆ ಕಡಲ ತೀರದಿಂದ ಪ್ರವಾಸಿಗರನ್ನು ಹಿಂದಕ್ಕೆ ಕಳುಹಿಸಲಾಯಿತು. ವಾಪಸ್ ಬರುವಂತೆ ಮೀನುಗಾರರಿಗೂ ಸೂಚನೆ ನೀಡಲಾಯಿತು. ಅಲ್ಲದೆ ಹೆಚ್ಚಿನ ಸಿಬ್ಬಂದಿ ನಿಯೋಜನೆಗೆ ಹಿರಿಯ ಅಧಿಕಾರಿಗಳು ಸೂಚನೆ ನೀಡಿದರು ಎಂದು ಕರಾವಳಿ ರಕ್ಷಣಾ ಪಡೆ ನಿಯಂತ್ರಣ ಕೊಠಡಿಯ ಎಸ್ಐ ತಿಮ್ಮಪ್ಪ `ಪ್ರಜಾವಾಣಿ~ಗೆ ತಿಳಿಸಿದರು.
ಕಾರವಾರದಲ್ಲಿ ಕಟ್ಟೆಚ್ಚರ
ಕಾರವಾರ: ಕೆಲವು ಕಡೆಗಳಲ್ಲಿ ಭೂಕಂಪ ಸಂಭವಿಸಿದ ವರದಿಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯ ಕರಾವಳಿಯಲ್ಲೂ ಕಟ್ಟೆಚ್ಚರ ವಹಿಸಲಾಗಿದೆ.
ಸದಾ ಜನರಿಂದ ತುಂಬಿರುತ್ತಿರ್ದುವ ನಗರದ ರವೀಂದ್ರನಾಥ ಟ್ಯಾಗೋರ ಕಡಲತೀರವು ಸಮುದ್ರದಲ್ಲಿ ದೊಡ್ಡದೊಡ್ಡ ಅಲೆಗಳು ಏಳಲಿವೆ ಎಂದು ಜನರು ಭಯಭೀತರಾಗಿದ್ದರಿಂದ ಬುಧವಾರ ಬಿಕೋ ಎನ್ನುತ್ತಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.