ADVERTISEMENT

ಮಹಾರಾಷ್ಟ್ರ ವರ್ತನೆಗೆ ಕಡಿವಾಣ ಹಾಕಿ

​ಪ್ರಜಾವಾಣಿ ವಾರ್ತೆ
Published 13 ಜುಲೈ 2012, 19:30 IST
Last Updated 13 ಜುಲೈ 2012, 19:30 IST
ಮಹಾರಾಷ್ಟ್ರ ವರ್ತನೆಗೆ ಕಡಿವಾಣ ಹಾಕಿ
ಮಹಾರಾಷ್ಟ್ರ ವರ್ತನೆಗೆ ಕಡಿವಾಣ ಹಾಕಿ   

ಬೆಂಗಳೂರು: ರಾಜ್ಯದ ಗಡಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಜತ್ತ ತಾಲ್ಲೂಕಿನಲ್ಲಿ ಕನ್ನಡಿಗರೇ ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಆ ಭಾಗದ ಗ್ರಾಮಗಳಿಗೆ ಶೈಕ್ಷಣಿಕ, ಔದ್ಯೋಗಿಕ, ಸಾಹಿತ್ಯಕ, ಸಾಂಸ್ಕೃತಿಕ ಮತ್ತು ಮೂಲ ಸೌಕರ್ಯ ಒದಗಿಸುವ ಸಂಬಂಧ ಮಹಾರಾಷ್ಟ್ರ ಸರ್ಕಾರದ ಜತೆ ಚರ್ಚಿಸಲಾಗುವುದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ `ಮುಖ್ಯಮಂತ್ರಿ~ ಚಂದ್ರು ಹೇಳಿದರು.

ಜತ್ತ ತಾಲ್ಲೂಕಿನ ಪ್ರಮುಖರ ಜತೆ ಮಾತುಕತೆ ನಡೆಸಿದ ನಂತರ ಅವರು ಈ ವಿಷಯ ತಿಳಿಸಿದರು. ಈ ಸಭೆಯಲ್ಲಿ ಸಾಹಿತಿ ಪ್ರೊ. ಚಂದ್ರಶೇಖರ ಪಾಟೀಲ ಮತ್ತಿತರರು ಹಾಜರಿದ್ದರು.ಗಡಿ ಭಾಗದ ಸಮಸ್ಯೆಗಳ ಕುರಿತು ಮಹಾರಾಷ್ಟ್ರ ಮುಖ್ಯಮಂತ್ರಿ ಜತೆ ಚರ್ಚಿಸಲಾಗುವುದು. ಪತ್ರ ಮೂಲಕವೂ ಮನವಿ ಮಾಡಲಾಗುವುದು. ಅಲ್ಲಿನ ಕನ್ನಡಿಗರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲು ಹಾಗೂ ಕನ್ನಡ ವ್ಯಾಸಂಗಕ್ಕೆ ಪೂರಕ ಸೌಲಭ್ಯ ಕಲ್ಪಿಸುವ ಕುರಿತು ಚರ್ಚಿಸಲಾಗುವುದು ಎಂದರು.

ಆ ಭಾಗದ ಜನರು ಒಟ್ಟು 33 ಬೇಡಿಕೆ ಇಟ್ಟಿದ್ದಾರೆ. ಅವುಗಳನ್ನು ಪರಿಶೀಲಿಸಿ, ಬಗೆಹರಿಸುವುದಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಕ್ರಮಕ್ಕೆ ಒತ್ತಾಯ: ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸುವಂತೆ ಒತ್ತಾಯಿಸಿ ಮಹಾರಾಷ್ಟ್ರ ವಿಧಾನಸಭೆ ನಿರ್ಣಯ ಅಂಗೀಕರಿಸಿರುವುದನ್ನು ಚಂದ್ರು ಮತ್ತು ಚಂಪಾ ಖಂಡಿಸಿದರು.
ಇದೇ 19ರಿಂದ ಆರಂಭವಾಗುವ ರಾಜ್ಯ ವಿಧಾನಮಂಡಲದಲ್ಲಿ ಇದಕ್ಕೆ ವಿರುದ್ಧವಾದ ನಿರ್ಣಯವನ್ನು ಅಂಗೀಕರಿಸಬೇಕು. ನಂತರ ಅದನ್ನು ಕೇಂದ್ರ ಸರ್ಕಾರಕ್ಕೂ ತಿಳಿಸಬೇಕು. ಮಹಾರಾಷ್ಟ್ರ ಮಿತಿಮೀರಿ ವರ್ತಿಸುತ್ತಿರುವುದಕ್ಕೆ ಕಡಿವಾಣ ಹಾಕುವಂತೆ ಆಗ್ರಹಿಸಬೇಕು ಎಂದೂ ಹೇಳಿದರು.

ಚೆನ್ನೈನಲ್ಲಿ ಕನ್ನಡ: ಪ್ರಾಧಿಕಾರದ ವತಿಯಿಂದ ಚೆನ್ನೈನಲ್ಲಿ ಭಾಷಾ ಭಾವೈಕ್ಯ ಸಮಾವೇಶ, ಕನ್ನಡ ಮಾಧ್ಯಮ ಪ್ರಶಸ್ತಿ ವಿತರಣೆ ಹಾಗೂ ಬಹುಭಾಷಾ ಕವಿ ಸಮ್ಮೇಳನವನ್ನು ಇದೇ ಶನಿವಾರ (ಜು.14) ಮತ್ತು ಭಾನುವಾರದಂದು  ಆಯೋಜಿಸಲಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.