ಹೊಸಪೇಟೆ: ಮಕ್ಕಳ ಕಳ್ಳನೆಂದು ಶಂಕಿಸಿ ಮಾನಸಿಕ ಅಸ್ವಸ್ಥನನ್ನು ಇಲ್ಲಿನ ಎಂ.ಜೆ. ನಗರದ 12ನೇ ಅಡ್ಡರಸ್ತೆಯಲ್ಲಿ ಶುಕ್ರವಾರ ಜನ ಥಳಿಸಿ, ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ.
ಬಳ್ಳಾರಿ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆ ಮಕ್ಕಳ ಕಳ್ಳರೆಂಬ ತಪ್ಪು ಅಭಿಪ್ರಾಯದಿಂದ ಜನರು ಮಾನಸಿಕ ಅಸ್ವಸ್ಥರು, ಅಲೆಮಾರಿಗಳು ಮತ್ತು ಭಿಕ್ಷುಕರನ್ನು ಥಳಿಸುವ ಪ್ರಕರಣಗಳು ಈಚೆಗೆ ಹೆಚ್ಚಾಗುತ್ತಿದೆ.
‘ಆಂಧ್ರಪ್ರದೇಶದಿಂದ ಮಕ್ಕಳ ಕಳ್ಳರು ಬಂದಿದ್ದಾರೆ ಎಂದು ಕಳೆದ ಕೆಲವು ದಿನಗಳಿಂದ ಜಿಲ್ಲೆಯಾದ್ಯಂತ ವದಂತಿ ಹರಡಿದೆ. ಇದು ಸುಳ್ಳು ಸುದ್ದಿ. ಯಾರು ಅದಕ್ಕೆ ಕಿವಿಗೊಡಬಾರದು ಎಂದು ಪೊಲೀಸ್ ಇಲಾಖೆಯಿಂದ ಹೇಳಿದರೂ ಜನ ನಂಬುತ್ತಿಲ್ಲ' ಎಂದು ಪೊಲೀಸರು ಹೇಳಿದ್ದಾರೆ.
‘ಹೊಸಪೇಟೆಯ ಎಂ.ಜೆ. ನಗರದಲ್ಲಿ ಮಧ್ಯಾಹ್ನ 3ರ ಸುಮಾರಿಗೆ ಮಾನಸಿಕ ಅಸ್ವಸ್ಥನೊಬ್ಬ ಓಡಾಡುತ್ತಿದ್ದ. ಈತನೇ ಮಕ್ಕಳ ಕಳ್ಳನಿರಬಹುದು ಎಂದು ಶಂಕಿಸಿ ಅಲ್ಲಿದ್ದವರು ಥಳಿಸಿದ್ದಾರೆ. ಆತನನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದೇವೆ. ಆತನ ಹೆಸರು, ಊರು ಏನು ಗೊತ್ತಿಲ್ಲ. ಗಂಭೀರವಾಗಿ ಗಾಯಗೊಂಡಿದ್ದ ಆತನಿಗೆ ಚಿಕಿತ್ಸೆ ನೀಡಿ ಕಳಿಸಿದ್ದೇವೆ’ ಎಂದು ಬಡಾವಣೆ ಠಾಣೆ ಪೊಲೀಸ್ ಅಧಿಕಾರಿ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.