ADVERTISEMENT

ಮಾನ ಹರಾಜಿನ ಭಯ: ವ್ಯಂಗ್ಯ

ಸಚಿವರ ಮೌಲ್ಯಮಾಪನಕ್ಕೆ ಸಿಎಂ ಹಿಂದೇಟು

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2013, 19:59 IST
Last Updated 17 ಸೆಪ್ಟೆಂಬರ್ 2013, 19:59 IST

ಬೆಂಗಳೂರು: ಸಚಿವರ ಮೌಲ್ಯಮಾ­ಪನದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಮೌಲ್ಯ ಮಾಪನವಾದರೆ ಮಾನ ಹರಾಜು ಆಗುವ ಭಯ ಕಾಡುತ್ತಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ವ್ಯಂಗ್ಯವಾಡಿದ್ದಾರೆ.

ಸರ್ಕಾರದ ಸಾಧನೆ ಶೂನ್ಯ. ಖಾಲಿ ಹಾಳೆಯನ್ನು ಮೌಲ್ಯಮಾಪನ ಮಾಡಲು ಸಾಧ್ಯವಿಲ್ಲ.  ಆದ್ದರಿಂದಲೇ ಮುಂದಕ್ಕೆ ಹಾಕಿ ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ ಎಂದು ಟೀಕಿಸಿದರು.

ಜಾಗತಿಕ ಕೃಷಿ ಸಮ್ಮೇಳನದಲ್ಲಿ ಭಾಗ ವಹಿಸಲು ಗುಜರಾತ್‌ ಸರ್ಕಾರ ರಾಜ್ಯದ ಪ್ರಗತಿಪರ ರೈತರಿಗೆ ಆಹ್ವಾನ ನೀಡಿತ್ತು. ಆದರೆ, ರಾಜ್ಯ ಸರ್ಕಾರ ರೈತರಿಗೆ ಸುಳ್ಳು ಮಾಹಿತಿ ನೀಡಿ ಸಮ್ಮೇಳನಕ್ಕೆ ಹೋಗದಂತೆ ತಡೆಯುವ ಪ್ರಯತ್ನ ಮಾಡಿರುವುದು ನಾಚಿಕೆಗೇಡಿನ ಸಂಗತಿ ಎಂದು ತರಾಟೆಗೆ ತೆಗೆದುಕೊಂಡರು.

ರಾಜಕೀಯ ವಿರೋಧಕ್ಕಾಗಿ ರೈತರ ಹಿತ ಬಲಿಕೊಡುವುದು ಸರಿಯಲ್ಲ. ಬೇರೆ ಪಕ್ಷದ ಆಡಳಿತ ಇರುವ ರಾಜ್ಯದ ಮುಖ್ಯಮಂತ್ರಿಯನ್ನು ಶತ್ರುವಿನ ಹಾಗೆ ಕಾಣುವುದು ಸರಿಯಲ್ಲ ಎಂದರು.

ಕೇಂದ್ರದ ಪೆಟ್ರೋಲಿಯಂ ಸಚಿವ ಸಚಿವ ಎಂ.ವೀರಪ್ಪ ಮೊಯಿಲಿ ಅವರು ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಇಟಲಿಯ ಮುಸ ಲೋನಿಗೆ ಹೋಲಿಕೆ ಮಾಡಿರುವುದನ್ನು ರವಿ ಟೀಕಿಸಿದರು.

ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ರಾಜಕೀಯ ವಿರೋಧಿಗಳನ್ನು ಜೈಲಿಗೆ ಕಳುಹಿಸಿದ್ದು ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಎಂಬುದನ್ನು ಕಾಂಗ್ರೆಸ್‌ನವರು ಮರೆತಿದ್ದಾರೆ. ಇಂದಿರಾ ಗಾಂಧಿ ಭಟ್ಟಂಗಿಗಳಾಗಿದ್ದ ಕಾಂಗ್ರೆಸ್‌ನವರಿಗೆ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವ ಹಕ್ಕಿಲ್ಲ ಎಂದು ಲೇವಡಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.