ADVERTISEMENT

ಮುಂಗಾರು ಆರ್ಭಟ ತಡವಾಯ್ತು ಹಿಂಗಾರು

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2017, 19:30 IST
Last Updated 22 ಅಕ್ಟೋಬರ್ 2017, 19:30 IST
ಮುಂಗಾರು ಆರ್ಭಟ ತಡವಾಯ್ತು ಹಿಂಗಾರು
ಮುಂಗಾರು ಆರ್ಭಟ ತಡವಾಯ್ತು ಹಿಂಗಾರು   

ಬೆಂಗಳೂರು: ‘ಮುಂಗಾರು ಮಳೆ ಕ್ಷೀಣಿಸುವುದು ತಡವಾದ ಕಾರಣ ಈಗಾಗಲೇ ರಾಜ್ಯಕ್ಕೆ ಹಿಂಗಾರು ಪ್ರವೇಶ ತಡವಾಗಿದ್ದು, ಇದು ಇನ್ನೂ ಐದಾರು ದಿನ ನಿಧಾನವಾಗಲಿದೆ’ ಎಂದು ಹವಾಮಾನ ಇಲಾಖೆ ತಿಳಿಸಿದೆ.

‘ಸಾಮಾನ್ಯವಾಗಿ ಅಕ್ಟೋಬರ್‌ 5 ರಿಂದ 10ರೊಳಗೆ ನೈರುತ್ಯ ಮುಂಗಾರು ಕ್ಷೀಣಿಸಿ, 15ಕ್ಕೆ ಹಿಂಗಾರು ಪ್ರವೇಶವಾಗುತ್ತದೆ. ಆದರೆ, ಈ ಬಾರಿ ಮುಂಗಾರು ಮಾರುತಗಳೇ ಇನ್ನೂ ಸಂಪೂರ್ಣವಾಗಿ ನಿರ್ಗಮಿಸಿಲ್ಲ’ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಜಿ.ಎಸ್‌. ಶ್ರೀನಿವಾಸ ರೆಡ್ಡಿ ತಿಳಿಸಿದರು.

‘ಬಂಗಾಳಕೊಲ್ಲಿಯಲ್ಲಿ ಮತ್ತೊಂದು ವಾಯುಭಾರ ಕುಸಿತ ಉಂಟಾಗಿದೆ. ಇದರಿಂದ ಉತ್ತರ ಒಳನಾಡಿನ ಕೆಲವು ಭಾಗಗಳಲ್ಲಿ ಮಳೆಯಾಗುತ್ತಿದೆ. ಇನ್ನೆರಡು ದಿನಗಳಲ್ಲಿ ನೈರುತ್ಯ ಮಾರುತಗಳು ಸಂಪೂರ್ಣ ಕ್ಷೀಣಿಸಲಿವೆ. 25ಕ್ಕೆ ಹಿಂಗಾರು ರಾಜ್ಯಕ್ಕೆ ಪ್ರವೇಶಿಸುವ ಸಾಧ್ಯತೆ ಇದೆ’ ಎಂದರು.

ADVERTISEMENT

‘ಮುಂಗಾರಿನಿಂದ ಹಿಂಗಾರಿಗೆ ಪರಿವರ್ತನೆಯಾಗುವ ಸಮಯದಲ್ಲಿ ಇಬ್ಬನಿ ಬೀಳುವುದು ಹಾಗೂ ಪ್ರಖರ ಬಿಸಿಲು ಸಾಮಾನ್ಯವಾಗಿರುತ್ತದೆ. ಇದರಿಂದಲೇ ರಾತ್ರಿ ಮತ್ತು ಬೆಳಿಗ್ಗೆ ಸಮಯದಲ್ಲಿ ಚಳಿಯ ಅನುಭವವಾಗುತ್ತಿದೆ. ಅಲ್ಲದೆ ಮಧ್ಯಾಹ್ನದ ನಂತರ ತಾಪಮಾನದಲ್ಲಿ ಏರಿಕೆಯಾಗುತ್ತಿದೆ. ಬೆಂಗಳೂರಿನ ಕೆಲವು ಭಾಗದಲ್ಲಿ ಈಗಾಗಲೇ 32 ಡಿಗ್ರಿ ತಾಪಮಾನ ದಾಖಲಾಗಿದೆ’ ಎಂದರು.

‘ಈಶಾನ್ಯ ಮಾರುತಗಳು ರಾಜ್ಯ ಪ್ರವೇಶಿಸಿದ ನಂತರ ದಕ್ಷಿಣ ಒಳನಾಡಿನಲ್ಲಿ ತುಂತುರು ಮಳೆಯಾಗಲಿದೆ. ಆಗ ಬೆಂಗಳೂರು ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಮತ್ತೆ ಮಳೆಯಾಗುತ್ತದೆ. ಅಲ್ಲಿಯವರೆಗೂ ಒಣಹವೆ ಮುಂದುವರಿಯುತ್ತದೆ’ ಎಂದರು.

‘ಮುಂಗಾರು ಮಳೆಯ ರೀತಿಯಲ್ಲಿ ಈಶಾನ್ಯ ಮಳೆ ಮಾರುತಗಳಿಂದ ಧಾರಾಕಾರ ಮಳೆ ಸುರಿಯುವುದಿಲ್ಲ. ತುಂತುರು ಹಾಗೂ ಸಾಧಾರಣ ಮಳೆಯಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.