ADVERTISEMENT

ಮುಂದಿನ ತಿಂಗಳಿನಲ್ಲಿ ರಾಜ್ಯ ಸರ್ಕಾರಕ್ಕೆ ಕಂಟಕ

ಕೋಡಿಮಠ ಸ್ವಾಮೀಜಿ ಭವಿಷ್ಯ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2013, 19:59 IST
Last Updated 2 ಸೆಪ್ಟೆಂಬರ್ 2013, 19:59 IST

ಹುಬ್ಬಳ್ಳಿ: `ರಾಜ್ಯ ಸರ್ಕಾರಕ್ಕೆ ಮುಂದಿನ ತಿಂಗಳಿನಲ್ಲಿ ಕಂಟಕ ಕಾದಿದೆ. ಇದರಿಂದ ಪಾರಾದರೂ ಸರ್ಕಾರ 11 ತಿಂಗಳು ಮಾತ್ರ ಅಸ್ತಿತ್ವದಲ್ಲಿ ಇರಲಿದೆ' ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಸೋಮವಾರ ಇಲ್ಲಿ ಭವಿಷ್ಯ ನುಡಿದರು.

ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಅವರು ತಮ್ಮನ್ನು ಭೇಟಿಯಾದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, `ಲೋಕಸಭಾ ಚುನಾವಣೆ ನಂತರ ರಾಷ್ಟ್ರ ಮತ್ತು ರಾಜ್ಯ ರಾಜಕೀಯ ರಂಗದಲ್ಲಿ ಭಾರಿ ಬದಲಾವಣೆಯಾಗಲಿದೆ. ಅಸಮಾಧಾನ ಸ್ಫೋಟಗೊಳ್ಳಲಿದ್ದು, ಎಲ್ಲ ಪಕ್ಷಗಳು ಒಡೆದು ಹೋಳಾಗಲಿವೆ' ಎಂದರು.

`ರಾಜ್ಯ ಮಾತ್ರವಲ್ಲ ರಾಷ್ಟ್ರ ರಾಜಕಾರಣದಲ್ಲಿ ಗೊಂದಲ ಸ್ಥಿತಿ ಮುಂದುವರಿಯಲಿದೆ. ಅದರ ಜೊತೆಗೆ ಆರ್ಥಿಕ ಅಸ್ಥಿರತೆ, ಸಾಮಾಜಿಕ ಅಭದ್ರತೆ ಇನ್ನೂ ಒಂದು ವರ್ಷ ಬಾಧಿಸಲಿದೆ. ರಾಜಕೀಯ ಇಚ್ಛಾಶಕ್ತಿಯಿಂದ ಮಾತ್ರ ಇದಕ್ಕೆ ಪರಿಹಾರ. ಈಗಿನಿಂದಲೇ ಪರಿಹಾರ ಕಾರ್ಯ ಕೈಗೊಂಡರೆ ಎದುರಾಗುವ ದೊಡ್ಡ ಆಪತ್ತು ತಪ್ಪಿಸಬಹುದು' ಎಂದು ನುಡಿದರು.

`ಗಣಿ ಹಾಗೂ ಇನ್ನಿತರ ಪ್ರಕರಣಗಳಲ್ಲಿ ಸಿಬಿಐ ನಡೆಸುತ್ತಿರುವ ತನಿಖೆ ಹಿನ್ನೆಲೆಯಲ್ಲಿ ರಾಜ್ಯದ ಹಲವು ರಾಜರಣಿಗಳು ಜೈಲಿಗೆ ಹೋಗುವುದು ನಿಶ್ಚಿತ. ಆ ದಿನಗಳು ಮತ್ತೆ ಆರಂಭವಾಗಲಿವೆ' ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.