ಬಾಗಲಕೋಟೆ: ತಾಲ್ಲೂಕಿನ ಬನ್ನಿದಿನ್ನಿ ಗ್ರಾಮದ ಘಟಪ್ರಭಾ ನದಿಯಲ್ಲಿ ಭಾನುವಾರ ಮೊಸಳೆ ದಾಳಿಗೆ ಸಿಲುಕಿ ಹನುಮಂತ
ಸಿದ್ಧಪ್ಪ ಕಟಗೇರಿ (34) ಎಂಬುವವರು ಗಾಯಗೊಂಡಿದ್ದಾರೆ.
ಎತ್ತುಗಳನ್ನು ತೊಳೆಯಲು ನದಿಗೆ ಇಳಿದಿದ್ದ ಹನುಮಂತ ಅವರ ಕಾಲನ್ನು ಕಚ್ಚಿ ಹಿಡಿದುಕೊಂಡ ಮೊಸಳೆ ಎಳೆದೊಯ್ಯಲಾರಂಭಿಸಿತು. ಆಗ ಚೀರಾಡಲಾರಂಭಿಸಿದ ಹನುಮಂತ ಅವರ ರಕ್ಷಣೆಗೆ ಧಾವಿಸಿದ ರೈತರು, ಹಗ್ಗ ನೀಡಿ, ಅವರನ್ನು ದಂಡೆಗೆ ಎಳೆದುಕೊಂಡರು. ನಂತರ ಕಲ್ಲು, ಕೋಲುಗಳಿಂದ ಮೊಸಳೆ ಬಾಯಿಗೆ ಬಡಿದ ಕಾರಣ ಹನುಮಂತ ಅವನ್ನು ಬಿಟ್ಟು ನದಿಗೆ ಇಳಿಯಿತು.
ಗಾಯಗೊಂಡಿರುವ ಹನುಮಂತ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅರಣ್ಯ ಇಲಾಖೆಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಮೊಸಳೆ ಸೆರೆಗೆ ಆಗ್ರಹ: ಜನ–ಜಾನುವಾರುಗಳ ಮೇಲೆ ದಾಳಿ ಮಾಡುತ್ತಿರುವ ಮೊಸಳೆಯನ್ನು ಸೆರೆಹಿಡಿದು ಬೇರೆಡೆಗೆ ಸಾಗಿಸುವಂತೆ ಗ್ರಾಮಸ್ಥರು ಇದೇ ವೇಳೆ ಅರಣ್ಯಾಧಿಕಾರಿಗಳನ್ನು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.