ADVERTISEMENT

ಯಲ್ಲಾಪುರ ಕಾಂಗ್ರೆಸ್ ಶಾಸಕನಿಗೆ ಬಿಜೆಪಿ ಆಮಿಷ ಆರೋಪ

ಕಾಂಗ್ರೆಸ್‌ನಿಂದ ಮತ್ತೊಂದು ಆಡಿಯೊ ಕ್ಲಿಪ್ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 19 ಮೇ 2018, 7:41 IST
Last Updated 19 ಮೇ 2018, 7:41 IST
ಯಲ್ಲಾಪುರ ಕಾಂಗ್ರೆಸ್ ಶಾಸಕನಿಗೆ ಬಿಜೆಪಿ ಆಮಿಷ ಆರೋಪ
ಯಲ್ಲಾಪುರ ಕಾಂಗ್ರೆಸ್ ಶಾಸಕನಿಗೆ ಬಿಜೆಪಿ ಆಮಿಷ ಆರೋಪ   

ಬೆಂಗಳೂರು: ಯಲ್ಲಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಿವರಾಮ್ ಹೆಬ್ಬಾರ್‌ ಅವರನ್ನು ಬಿಜೆಪಿಗೆ ಸೆಳೆಯಲು ಸ್ವತಃ ಯಡಿಯೂರಪ್ಪ ಅವರ ಮಗ ವಿಜಯೇಂದ್ರ ಆಮಿಷವೊಡ್ಡಿದ್ದಾರೆ ಎನ್ನಲಾದ ಆಡಿಯೊ ಕ್ಲಿಪ್ ಒಂದನ್ನು ಶನಿವಾರ ಖಾಸಗಿ ಸುದ್ದಿ ವಾಹಿನಿಗಳು ಪ್ರಸಾರ ಮಾಡಿವೆ. ಯಡಿಯೂರಪ್ಪ ಅವರ ಆಪ್ತರಾದ ಪುಟ್ಟಸ್ವಾಮಿ ಅವರ ಮಾತನ್ನೂ ಈ ಆಡಿಯೊ ಕ್ಲಿಪ್ ಹೊಂದಿದೆ.

ಶಿವರಾಮ್ ಹೆಬ್ಬಾರ್ ಅವರ ಪತ್ನಿ ವನಜಾಕ್ಷಿ ಅವರೊಂದಿಗೆ ಪುಟ್ಟಸ್ವಾಮಿ ಮತ್ತು ವಿಜಯೇಂದ್ರ ಸಂಭಾಷಣೆ ನಡೆಸಿದ್ದಾರೆ ಎನ್ನಲಾಗಿದೆ.

ವಿಜಯೇಂದ್ರ ಮತ್ತು ಪುಟ್ಟಸ್ವಾಮಿ ಅವರದ್ದು ಎನ್ನಲಾದ ದನಿಯು ವನಜಾಕ್ಷಿ ಅವರಿಗೆ ₹15 ಕೋಟಿ ನಗದು ಅಥವಾ ಸಚಿವ ಸ್ಥಾನದೊಂದಿಗೆ ₹5 ಕೋಟಿ ನಗದು ನೀಡುವ ಆಮಿಷವೊಡ್ಡಿದೆ. ಶಾಸಕರ ಪತ್ನಿಯದ್ದು ಎನ್ನಲಾದ ದನಿಯು ಎರಡನೇ ಆಯ್ಕೆಯನ್ನು ಒಪ್ಪಿಕೊಂಡಿದೆ. ಇದೇ ಸಂದರ್ಭ ಮಗನ ಮೇಲೆ ಇರುವ ಮೈನಿಂಗ್ ಪ್ರಕರಣಗಳಿಂದ ಮುಕ್ತಿಕೊಡಿಸಿ ಎಂದೂ ವನಜಾಕ್ಷಿ ಅವರ ದನಿ ಕೋರಿದೆ.

ADVERTISEMENT

‘ಯಡಿಯೂರಪ್ಪ ಅವರು ನಂಬಿದವರನ್ನು ಎಂದಿಗೂ ಕೈಬಿಡುವುದಿಲ್ಲ. ನನ್ನ ಮೇಲೆಯೂ ಸಾಕಷ್ಟು ಕೇಸ್‌ಗಳಿವೆ. ಎಲ್ಲವನ್ನೂ ಮ್ಯಾನೇಜ್ ಮಾಡಬಹುದು. ನಿಮ್ಮೋರು ಸಚಿವರೇ ಆಗ್ತಾರಲ್ಲಾ, ಸರ್ಕಾರವೇ ನಮ್ಮದು. ಯಾಕೆ ಯೋಚನೆ ಮಾಡ್ತೀರಿ?’ ಎಂದು ವಿಜಯೇಂದ್ರ ಅವರದ್ದು ಎನ್ನಲಾದ ದನಿ ಭರವಸೆ ನೀಡಿದೆ.

ರಾಯಚೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಸವನಗೌಡ ದದ್ದಲ ಅವರಿಗೆ ಬಿಜೆಪಿಯ ಗಾಲಿ ಜನಾರ್ದನರೆಡ್ಡಿ ಅವರು ಆಮಿಷ ಒಡ್ಡಿರುವ ಆಡಿಯೊ ಕ್ಲಿಪ್ ಅನ್ನು ನಿನ್ನೆಯಷ್ಟೇ ಕಾಂಗ್ರೆಸ್ ಬಿಡುಗಡೆ ಮಾಡಿದ್ದನ್ನು ಇಲ್ಲಿ ನೆನೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.