ಮಂಗಳೂರು:`ಕಾರವಾರ- ಬೆಂಗಳೂರು ನಡುವೆ ಶೀಘ್ರ ಪೂರ್ಣ ಪ್ರಮಾಣದ ರೈಲು ಸಂಚಾರ ಆರಂಭಿಸಲಾಗುವುದು~ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ಕಾರವಾರಕ್ಕೆ ವಿಸ್ತರಣೆಗೊಂಡಿರುವ ಯಶವಂತಪುರ- ಕಣ್ಣೂರು ರೈಲಿನ 13 ಬೋಗಿಗಳಿಗೆ ಹಸಿರು ನಿಶಾನೆ ತೋರುವ ಸಲುವಾಗಿ ಮಂಗಳೂರು ಕೇಂದ್ರೀಯ ರೈಲು ನಿಲ್ದಾಣದಲ್ಲಿ ಗುರುವಾರ ಬೆಳಿಗ್ಗೆ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
`ರೈಲ್ವೆ ಇಲಾಖೆ ಕಾರವಾರ ಹಾಗೂ ಕಣ್ಣೂರು ಪಾಲಿಗೆ ಎರಡು ಕಣ್ಣುಗಳಿದ್ದಂತೆ. ಎರಡೂ ನಗರಗಳನ್ನು ಇಲಾಖೆ ಸಮಾನವಾಗಿ ನೋಡುತ್ತದೆ. ಎರಡೂ ನಗರಗಳಿಗೂ ಪ್ರತ್ಯೇಕ ರೈಲು ಸೇವೆ ಒದಗಿಸಲಾಗುವುದು. ತಿರುನಲ್ವೇಲಿ- ದಾದರ್ ನಡುವೆ ಶೀಘ್ರವೇ ಹೊಸ ರೈಲು ಯಾನ ಆರಂಭವಾಗಲಿದೆ~ ಎಂದರು.
ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ ಮಂಗಳೂರು ನಿಲ್ದಾಣದಿಂದ ಮೊದಲ ಬಾರಿಗೆ ಕಾರವಾರಕ್ಕೆ ಪ್ರಯಾಣ ಬೆಳೆಸಿದ ರೈಲಿಗೆ ಹಸಿರು ನಿಶಾನೆ ತೋರಿದರು.
ಸಡಗರದ ಸ್ವಾಗತ:ಬೆಂಗಳೂರಿನಿಂದ ಬಂದ ರೈಲಿನ 13 ಬೋಗಿಗಳನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಿಂಗರಿಸಿ ಕಾರವಾರಕ್ಕೆ ಕಳುಹಿಸಿಕೊಡಲಾಯಿತು. ಕರಾವಳಿಯುದ್ದಕ್ಕೂ ವಿವಿಧ ರೈಲು ನಿಲ್ದಾಣಗಳಲ್ಲಿ ಸ್ಥಳೀಯರು ರೈಲನ್ನು ಸಡಗರದಿಂದ ಸ್ವಾಗತಿಸಿದರು.
ನಾಳೆ ಹುಬ್ಬಳ್ಳಿ- ಬೆಂಗಳೂರು
ಪ್ಯಾಸೆಂಜರ್ ರೈಲು ಸಂಚಾರ ರದ್ದು
ಹುಬ್ಬಳ್ಳಿ:ಮೈಸೂರು ವಿಭಾಗದ ಬೀರೂರು- ಶಿವನಿ ಮಾರ್ಗದ ನಾಗಮಂಗಲ ನಿಲ್ದಾಣ ಬಳಿ ಹಳಿ ಪರಿವರ್ತನೆ ಕಾಮಗಾರಿ ಹಮ್ಮಿಕೊಂಡಿರುವ ಕಾರಣ ಹುಬ್ಬಳ್ಳಿ- ಬೆಂಗಳೂರು ಪ್ಯಾಸೆಂಜರ್ (56516) ಹಾಗೂ ಬೆಂಗಳೂರು- ಹುಬ್ಬಳ್ಳಿ ಪ್ಯಾಸೆಂಜರ್ (56915) ರೈಲುಗಳ ಸಂಚಾರವನ್ನು ಇದೇ 20ರಂದು ಸಂಪೂರ್ಣ ರದ್ದು ಮಾಡಲಾಗಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ. ಅಂದು ಮಧ್ಯಾಹ್ನ 12.10 ರಿಂದ ಸಂಜೆ 4.10ರವರೆಗೆ ಕಾಮಗಾರಿಗೆ ಅನುಮತಿ ಪಡೆಯಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.