ADVERTISEMENT

ಯುಪಿಸಿಎಲ್‌ಗೆ ಪೇಜಾವರ ಶ್ರೀ ವಾರದ ಗಡುವು

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2011, 17:25 IST
Last Updated 23 ಫೆಬ್ರುವರಿ 2011, 17:25 IST

ಪಡುಬಿದ್ರಿ (ಉಡುಪಿ ಜಿಲ್ಲೆ):  ಯುಪಿಸಿಎಲ್ ಯೋಜನೆಯಿಂದ ನಿರಂತರ ಸಮಸ್ಯೆ ಆಗುತ್ತಿದ್ದು, ಒಂದು ವಾರದೊಳಗೆ ಕಂಪೆನಿ ಮುಚ್ಚದಿದ್ದಲ್ಲಿ ಕಂಪೆನಿ ವಿರುದ್ಧ ಹೋರಾಟ ನಡೆಸುವುದಾಗಿ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಎಚ್ಚರಿಸಿದ್ದಾರೆ.
ಯುಪಿಸಿಎಲ್ ಯೋಜನೆಯಿಂದ ಸಮಸ್ಯೆಗೊಳಗಾಗುತ್ತಿರುವ ಪ್ರದೇಶಕ್ಕೆ ಬುಧವಾರ ಸಂಜೆ ಭೇಟಿ ನೀಡಿ ಪತ್ರಕರ್ತರೊಂದಿಗೆ ಮಾತನಾಡಿದರು.

ಯೋಜನೆಯಿಂದ ಸ್ಥಳೀಯರಿಗೆ ಆಗುತ್ತಿರುವ ಸಮಸ್ಯೆಯನ್ನು ಕಣ್ಣಾರೆ ಕಂಡಿದ್ದೇನೆ. ಜನರ ಸಮಸ್ಯೆ ಕಣ್ಣಾರೆ ಕಂಡು ಸುಮ್ಮನೆ ಕುಳಿತುಕೊಳ್ಳಲು ಆಗದು. ಕರಾವಳಿ ಪ್ರದೇಶವನ್ನು ಭಸ್ಮ ಮಾಡಲು ಹೊರಟಿರುವ ‘ಆಧುನಿಕ ಭಸ್ಮಾಸುರ’ ಯುಪಿಸಿಎಲ್ ಯೋಜನೆಯನ್ನು ಕೂಡಲೇ ಸ್ಥಗಿತಗೊಳಿಸಬೇಕು. ಈ ಯೋಜನೆಯನ್ನು ವಾರದೊಳಗೆ ಸ್ಥಗಿತಗೊಳಿಸಬೇಕು. ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಹಾಗೂ ಕಂಪೆನಿಗೆ, ಇಲಾಖೆಗೆ ಪತ್ರ ಬರೆಯುತ್ತೇನೆ. ಬಳಿಕವೂ ಕ್ರಮ ಕೈಗೊಳ್ಳದಿದ್ದಲ್ಲಿ ಮಾರ್ಚ್ 4ರಂದು ಹೋರಾಟ ಬಗ್ಗೆ ತೀರ್ಮಾನಿಸಲಾಗುವುದು ಎಂದರು.

ಯೋಜನೆಯಿಂದ ನೀರು, ಗಾಳಿ, ಕೃಷಿ, ಭೂಮಿ ಮೇಲೆ ಅಪಾರ ಹಾನಿಯಾಗಿದೆ. ಇಷ್ಟೆಲ್ಲಾ ಸಮಸ್ಯೆ ಇದ್ದರೂ ಕಂಪೆನಿಯು ಸ್ಥಳೀಯರಿಗೆ ಮತ್ತಷ್ಟು ಸಮಸ್ಯೆ ನೀಡುತ್ತಿರುವುದು ಸರಿಯಲ್ಲ. ಈ ಸಮಸ್ಯೆ ಗಂಭೀರವಾಗಿದ್ದು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲರೂ ಹೋರಾಟದಲ್ಲಿ ಭಾಗಿಯಾಗಬೇಕು. ಸಾರ್ವಜನಿಕರು ನಡೆಸುವ ಯಾವುದೇ ಹೋರಾಟದಲ್ಲಿ ನಾನು ಸಕ್ರಿಯವಾಗಿ ಭಾಗವಹಿಸುತ್ತೇನೆ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.