ಬೆಂಗಳೂರು: ‘ಪತ್ರಕರ್ತರಾದ ರವಿ ಬೆಳಗೆರೆ ಮತ್ತು ಅನಿಲ್ ರಾಜ್ ಸೋಮವಾರ ವಿಧಾನಸಭೆಯ ಸ್ವೀಕರ್ ಮುಂದೆ ಹಾಜರಾಗಬೇಕು’ ಎಂದು ಹೈಕೋರ್ಟ್ ಸೂಚನೆ ನೀಡಿದೆ.
‘ಹಕ್ಕು ಬಾಧ್ಯತೆ ಸಮಿತಿಯ ಶಿಫಾರಸಿನಂತೆ ಸದನದಲ್ಲಿ ಕೈಗೊಂಡಿರುವ ನಿರ್ಣಯವನ್ನು ಮರುಪರಿಶೀಲಿಸಬೇಕು ಎಂದು ಕೋರಿ ಹೊಸ ಜ್ಞಾಪನಾ ಪತ್ರ ಸಲ್ಲಿಸಬೇಕು’ ಎಂದು ಹೈಕೋರ್ಟ್ ಹೇಳಿದೆ.
‘ಸ್ಪೀಕರ್ ಮುಂದೆ ಹಾಜರಾದಾಗ ಅರ್ಜಿದಾರರನ್ನು ಬಂಧಿಸುವ ಭೀತಿ ಇದೆ’ ಎಂಬ ಅರ್ಜಿದಾರರ ಪರ ವಕೀಲರ ಆತಂಕಕ್ಕೆ ಪ್ರತಿಕ್ರಿಯಿಸಿದ ಎಎಜಿ ಪೊನ್ನಣ್ಣ, ‘ಆ ರೀತಿಯ ಯಾವುದೇ ಕ್ರಮಕ್ಕೆ ಮುಂದಾಗುವುದಿಲ್ಲ’ ಎಂದು ಮೌಖಿಕ ಭರವಸೆ ನೀಡಿದರು.
‘ಒಂದು ವೇಳೆ ಆ ರೀತಿ ಏನಾದರೂ ಆದಲ್ಲಿ ಯಾವುದೇ ಹೊತ್ತಿನಲ್ಲಿ ಬಂದು ಕೋರ್ಟ್ ಸಂಪರ್ಕಿಸಿ’ ಎಂದು ನ್ಯಾಯಮೂರ್ತಿಗಳು ಸೂಚಿಸಿದರು.
‘ಅರ್ಜಿದಾರರನ್ನು ಬಂಧಿಸದಂತೆ ಆದೇಶಿಸಿ’ ಎಂದು ಅರ್ಜಿದಾರರ ಪರ ವಕೀಲರು ಎಷ್ಟು ಬೇಡಿಕೊಂಡರೂ ನ್ಯಾಯಪೀಠ ಆ ಮನವಿಯನ್ನು ಸಾರಾಸಗಟಾಗಿ ತಳ್ಳಿ ಹಾಕಿತು.
‘ಇನ್ನು ಮುಂದೆ ಅರ್ಜಿದಾರರು ಯಾವುದೇ ಅವಿಧೇಯತೆ ಪ್ರದರ್ಶಿಸಿದರೆ ಅಥವಾ ಸೊಂಟದ ಕೆಳಗಿನ ಭಾಷೆ ಬಳಸಿದರೆ ಸದನ ನಿಮ್ಮ ವಿರುದ್ಧ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ’ ಎಂದು ನ್ಯಾಯಪೀಠ ಗಂಭೀರ ಎಚ್ಚರಿಕೆ ನೀಡಿದೆ.
‘ಪತ್ರಿಕೋದ್ಯಮವನ್ನು ಪ್ರಜಾತಾಂತ್ರಿಕ ಮಾರ್ಗದಲ್ಲಿ ಮುನ್ನಡೆಸಿಕೊಂಡು ಹೋಗಿ’ ಎಂದು ನ್ಯಾಯಪೀಠ ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.