ADVERTISEMENT

ರಾಜಕೀಯ ನಿವೃತ್ತಿ- ಸೋಮಶೇಖರ ರೆಡ್ಡಿ ಸವಾಲು

​ಪ್ರಜಾವಾಣಿ ವಾರ್ತೆ
Published 10 ಜೂನ್ 2012, 19:30 IST
Last Updated 10 ಜೂನ್ 2012, 19:30 IST

ಬಳ್ಳಾರಿ: `ಸೋದರ ಜಿ.ಜನಾರ್ದನ ರೆಡ್ಡಿ ಅವರಿಗೆ ಜಾಮೀನು ಪಡೆಯುವುದಕ್ಕಾಗಿ ಯಾರಿಗೂ ಹಣ ನೀಡಿಲ್ಲ. ನಾನು ಯಾವುದೇ ರೀತಿಯ ತಪ್ಪು ಮಾಡಿಲ್ಲ. ತಪ್ಪು ಮಾಡಿದ್ದು ರುಜುವಾತು ಆದಲ್ಲಿ  ರಾಜಕೀಯ ನಿವೃತ್ತಿ ಪಡೆಯುವೆ~ ಎಂದು ಶಾಸಕ ಜಿ.ಸೋಮಶೇಖರ ರೆಡ್ಡಿ ತಿಳಿಸಿದರು.

ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಮತ ಹಾಕಲು ನಗರದ ಮತ ಕೇಂದ್ರವೊಂದಕ್ಕೆ ಭಾನುವಾರ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಜನಾರ್ದನ ರೆಡ್ಡಿ ಜಾಮೀನಿಗಾಗಿ ನ್ಯಾಯಾಧೀಶರ ಮೇಲೆ ಪ್ರಭಾವ ಬೀರಲು ಲಂಚ ನೀಡಿರುವ ಆರೋಪದ ಹಿನ್ನೆಲೆಯಲ್ಲಿ, ಆಂಧ್ರಪ್ರದೇಶದ ಭ್ರಷ್ಟಾಚಾರ ವಿರೋಧಿ ದಳ (ಎಸಿಬಿ), ಎಫ್‌ಐಆರ್‌ನಲ್ಲಿ ತಮ್ಮ ಹೆಸರು ಸೇರಿಸಿರುವ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, `ಲಂಚದ ಕುರಿತು ನನಗೇನೂ ಗೊತ್ತಿಲ್ಲ. ಈ ವಿಷಯವಾಗಿ ನಾನು ಯಾರ ಜತೆಗೂ ಮಾತನಾಡಿಲ್ಲ. ~

ಇದೆಲ್ಲವೂ ರಾಜಕೀಯ ಕುತಂತ್ರ. ಶಾಸಕ ಸುರೇಶಬಾಬು ಸೇರಿದಂತೆ ನಾವು ಯಾವುದೇ ತಪ್ಪನ್ನು ಮಾಡಿಲ್ಲ. ಈ ಕುರಿತ  ಆಧಾರಗಳಿದ್ದಲ್ಲಿ ಬಹಿರಂಗಪಡಿಸಲಿ~ ಎಂದರು.

`ನ್ಯಾಯಾಧೀಶರಿಗೆ  ಲಂಚ ನೀಡುವ ಕುರಿತು ನಾವು ಎಂದೂ ಯೋಚಿಸಿಲ್ಲ. ಅದರ ಅಗತ್ಯವೇ ಇಲ್ಲ. ನಮಗೆ ಕಾನೂನಿನ ಮೇಲೆ ಗೌರವವಿದೆ. ಈ ಕುರಿತು ಕಾನೂನು ತಜ್ಞರೊಂದಿಗೆ ಚರ್ಚಿಸಿ, ಕಾನೂನು ಹೋರಾಟ ನಡೆಸುತ್ತೇವೆ~ ಎಂದು ಸ್ಪಷ್ಟಪಡಿಸಿದರು.

`ಜನಾರ್ದನ ರೆಡ್ಡಿಗೆ ಜಾಮೀನು ದೊರೆತ ದಿನ ನಾನು ಹೈದರಾಬಾದ್‌ನ ಸಿಬಿಐ ಕೋರ್ಟ್‌ನಲ್ಲಿದ್ದೆ ಎಂದು ರೆಡ್ಡಿ ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.