ADVERTISEMENT

ರಾಜ್ಯದಾದ್ಯಂತ ಕರ್ನಾಟಕ ರಾಜ್ಯೋತ್ಸವ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2017, 12:29 IST
Last Updated 1 ನವೆಂಬರ್ 2017, 12:29 IST
ರಾಜ್ಯದಾದ್ಯಂತ ಕರ್ನಾಟಕ ರಾಜ್ಯೋತ್ಸವ ಸಂಭ್ರಮ
ರಾಜ್ಯದಾದ್ಯಂತ ಕರ್ನಾಟಕ ರಾಜ್ಯೋತ್ಸವ ಸಂಭ್ರಮ   

ಶಿರಸಿ: 160 ಮೀಟರ್ ಉದ್ದದ ಕನ್ನಡ ಧ್ವಜದ ಮೆರವಣಿಗೆ ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಆಚರಣೆಗೆ ವಿಶೇಷ ಮೆರುಗು ತಂದಿತ್ತು.

ನಗರದ ವಿವಿಧ ಶಾಲೆಗಳ 400ಕ್ಕೂ ಅಧಿಕ ಮಕ್ಕಳು  ಧ್ವಜ ಹಿಡಿದು ಸಾಗುತ್ತಿದ್ದರೆ ಹಿನ್ನೆಲೆಯಲ್ಲಿ ಕನ್ನಡದ ಗೀತೆ ಮೊಳಗುತ್ತಿತ್ತು. ಹಾದಿ, ಬೀದಿಯಲ್ಲಿ ಸಾಗುವವರು, ಬೆಳಗಿನ ಮನೆವಾರ್ತೆ ಮಾಡುತ್ತಿದ್ದ ಹೆಂಗಸರು ಕುತೂಹಲದಿಂದ ಹೊರಗೆ ಬಂದು ಕನ್ನಡ ಧ್ವಜದ ಮೆರವಣಿಗೆ ನೋಡಿ ಸಂಭ್ರಮಿಸಿದರು.

ರೆಡ್ ಆ್ಯಂಟ್ ಸಂಘಟನೆಯ ಮಹೇಶ ನಾಯ್ಕ ಮತ್ತು ಗೆಳೆಯರು ಕನ್ನಡದ ಮೇಲಿನ‌ ಪ್ರೀತಿ, ಮಕ್ಕಳಲ್ಲಿ ಕನ್ನಡ ನಾಡಿನ ಬಗ್ಗೆ ಅಭಿಮಾನ ಮೂಡಿಸುವ ಉದ್ದೇಶದಿಂದ ₹12 ಸಾವಿರ ವೆಚ್ಚದಲ್ಲಿ ಒಂದು ವಾರ ಕಾಲ‌ ಕೆಲಸ ಮಾಡಿ ಈ ಧ್ವಜ ಸಿದ್ಧಪಡಿಸಿದ್ದಾರೆ.

ADVERTISEMENT

ಮಾರಿಕಾಂಬಾ ಪ್ರೌಢಶಾಲೆಯ ಮೈದಾನದಲ್ಲಿ ಉಪವಿಭಾಗಾಧಿಕಾರಿ ಕೆ. ರಾಜು ಮೊಗವೀರ ಧ್ವಜಾರೋಹಣ ನೆರವೇರಿಸಿ, ಕನ್ನಡಾಂಬೆಗೆ ಪೂಜೆ ಸಲ್ಲಿಸಿದರು. ಶಾಲಾ ಮಕ್ಕಳು ಆಕರ್ಷಕ ಪಥ ಸಂಚಲನ ನಡೆಸಿದರು.

ಕಾರವಾರ: ಪೊಲೀಸ್ ಪರೇಡ್ ಮೈದಾನದಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಕನ್ನಡ ಧ್ವಜಾರೋಹಣ ನೆರವೇರಿಸಿದರು.

ಜಿಲ್ಲಾ ಸಶಸ್ತ್ರ ಪಡೆ, ಅರಣ್ಯ ಇಲಾಖೆ, ಎನ್ಎಸ್ಎಸ್ ತುಕುಡಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು.

ಹಾವೇರಿಯಲ್ಲಿ ಕರ್ನಾಟಕ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಚಿವ ರುದ್ರಪ್ಪ ಲಮಾಣಿ.

ಮಂಗಳೂರಿನ ನೆಹರೂ ಮೈದಾನದಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ರಾಜ್ಯೋತ್ಸವ ಆಚರಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಧ್ವಜಾರೋಹಣ ನೆರವೇರಿಸಿದರು.

ತುಮಕೂರು: ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಧ್ವಜಾರೋಹಣ ಮಾಡಿದರು.

ವಿವಿಧ ಶಾಲಾ ಕಾಲೇಜು, ಪೊಲೀಸ್, ಎನ್‌ಸಿಸಿ ಕವಾಯತು ತಂಡಗಳು ನಡೆಸಿದ ಪಥ ಸಂಚಲನ ಆಕರ್ಷಕವಾಗಿತ್ತು. ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ನಾಡು ನುಡಿ ಅಭಿಮಾನ ಗೀತೆಗಳಿಗೆ ನೃತ್ಯ ಮಾಡಿದರು.

ಚಿತ್ರದುರ್ಗ: ಕನ್ನಡ ಉತ್ಸವದಲ್ಲಿ ಕೆಎಸ್‌ಆರ್‌ಟಿಸಿಯ 'ಕನ್ನಡ ರಥ’ ಗಮನ ಸೆಳೆಯಿತು.


ಜಿಲ್ಲಾ ಉಸ್ತುವಾರಿ ಸಚಿವ ಆಂಜನೇಯ ಜಿಲ್ಲಾ ಮಟ್ಟದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದರು. ಶಾಲಾ‌ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.

ಮಂಡ್ಯದಲ್ಲಿ ಸಂಭ್ರಮದ ಕರ್ನಾಟಕ ರಾಜ್ಯೋತ್ಸವ


ಕಲಬುರ್ಗಿ: ಇಲ್ಲಿನ ನೆಹರೂ ಗಂಜ್ ಪ್ರದೇಶದ ನಗರೇಶ್ವರ ಬಾಲ ಮಂದಿರದಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಮೆರವಣಿಗೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಅದ್ಧೂರಿ ಚಾಲನೆ ನೀಡಿದರು.

ಸಾರೋಟಿನಲ್ಲಿ ಪ್ರತಿಷ್ಠಾಪಿಸಿದ್ದ ನಾಡದೇವಿ ಭುವನೇಶ್ವರಿ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚಣೆ ಮಾಡಿದರು.

ಈ ವೇಳೆ ಡೊಳ್ಳು ಕಲಾವಿದರ ಪ್ರದರ್ಶನ ಗಮನ ಸೆಳೆಯಿತು.

ಶಾಸಕ ಬಿ.ಜಿ.ಪಾಟೀಲ, ಮೇಯರ್ ಶರಣಕುಮಾರ ಮೋದಿ, ಎನ್.ಇ.ಕೆ.ಆರ್.ಟಿ.ಸಿ ಅಧ್ಯಕ್ಷ ಇಲಿಯಾಸ್ ಬಾಗವಾನ್, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ವೀರಭದ್ರ ಸಿಂಪಿ, ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.