ಬೆಂಗಳೂರು: ‘ಮಂತ್ರಿ ಮಂಡಲದ ನಿರ್ಣಯವನ್ನು ಬದಿಗೊತ್ತಿ ಸಚಿವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಆದೇಶಿಸುವ ಅಧಿಕಾರ ರಾಜ್ಯಪಾಲರಿಗೆ ಇದೆ’ ಎಂದು 2004ರಲ್ಲಿ ಸುಪ್ರೀಂ ಕೋರ್ಟ್ನ ಪೂರ್ಣಪೀಠ ತೀರ್ಪು ನೀಡಿದೆ.
ಭ್ರಷ್ಟಾಚಾರದ ಆರೋಪ ಹೊತ್ತಿದ್ದ ಮಧ್ಯಪ್ರದೇಶದ ಸಚಿವರಾಗಿದ್ದ ರಾಜೇಂದ್ರ ಕುಮಾರ್ ಸಿಂಗ್ ಹಾಗೂ ಬಿಸಾಹು ರಾಮ್ ಯಾದವ್ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವುದು ಸರಿಯಲ್ಲ ಎಂದು ಅಲ್ಲಿಯ ಮಂತ್ರಿ ಮಂಡಲ ತೆಗೆದುಕೊಂಡಿದ್ದ ನಿರ್ಣಯವನ್ನು ನ್ಯಾಯಮೂರ್ತಿಗಳಾಗಿದ್ದ ಸಂತೋಷ್ ಹೆಗ್ಡೆ ನೇತೃತ್ವದ ಪೂರ್ಣ ಪೀಠ ರದ್ದು ಮಾಡಿ ಈ ಆದೇಶ ಹೊರಡಿಸಿದೆ.
ಇಂದೋರ್ ಅಭಿವೃದ್ಧಿ ಪ್ರಾಧಿಕಾರವು ಸ್ವಾಧೀನ ಪಡಿಸಿಕೊಂಡಿದ್ದ ಜಮೀನಿನ ಪೈಕಿ 7.5 ಎಕರೆ ಜಮೀನನ್ನು ಕಾನೂನು ಉಲ್ಲಂಘಿಸಿ ಅದರ ಮೂಲ ಮಾಲೀಕರಿಗೆ ವಾಪಸು ಮಾಡಿರುವ ಆರೋಪಕ್ಕೆ ಈ ಸಚಿವರು ಒಳಗಾಗಿದ್ದರು.
‘ಕೆಲವೊಂದು ಸಂದರ್ಭಗಳಲ್ಲಿ ಒತ್ತಡಕ್ಕೆ ಮಣಿದೋ ಇನ್ನಾವುದೋ ಕಾರಣಕ್ಕೆ ಕಾನೂನು ಮೀರಿದ ನಿರ್ಣಯವನ್ನು ಮಂತ್ರಿ ಮಂಡಲ ನೀಡುವುದು ಇದೆ. ಆಗ ರಾಜ್ಯಪಾಲರು ಇದಕ್ಕೆ ಅಸಮ್ಮತಿ ವ್ಯಕ್ತಪಡಿಸಬಹುದು. ಇಲ್ಲದೇ ಹೋದರೆ ಸಂವಿಧಾನದ ಸಂಪೂರ್ಣ ಆಶಯವೇ ಬುಡಮೇಲಾಗುತ್ತದೆ. ಇದರಿಂದಾಗಿ ಅಧಿಕಾರದಲ್ಲಿ ಇರುವವರು ತಾವು ಏನು ಮಾಡಿದರೂ ನಡೆಯುತ್ತದೆ ಎಂಬ ದೃಷ್ಟಿಯಿಂದ ಕಾನೂನನ್ನು ಉಲ್ಲಂಘನೆ ಮಾಡುವಲ್ಲಿ ಮುಂದಾಗುತ್ತಾರೆ’ ಎಂದು ನ್ಯಾಯಮೂರ್ತಿಗಳು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.