ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಕಗ್ಗಂಟು ಸಡಿಲವಾಗಿರುವ ಲಕ್ಷಣಗಳು ಶುಕ್ರವಾರ ಕಂಡು ಬರುತ್ತಿವೆ. ಬೆಂಗಳೂರಿನಲ್ಲಿ ಮೋಡಮುಸುಕಿದ ಮಂಕು ವಾತಾವರಣ ಇದೆ. ಆದರೆ ಸಚಿವ ಸ್ಥಾನದ ಆಕಾಂಕ್ಷಿಗಳು ಮಾತ್ರ ವಿಪರೀತ ಚಟುವಟಿಕೆ ನಡೆಸುತ್ತಿದ್ದಾರೆ. ವರಿಷ್ಠರ ಮನೆ ಸುತ್ತುತ್ತಿದ್ದಾರೆ. ಸಚಿವ ಸ್ಥಾನ ಗಟ್ಟಿಯಾಗಿರುವವರು ಪ್ರಮುಖ ಖಾತೆಗಳಿಗಾಗಿ ಲಾಬಿ ಮಾಡುತ್ತಿದ್ದಾರೆ.
ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ಎಂದು ನಡೆಸಬೇಕು ಎಂದು ಚರ್ಚಿಸಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯಪಾಲರ ಭೇಟಿಗೆ ಸಮಯ ಕೋರಿದ್ದಾರೆ. ಭಾನುವಾರ ನೂತನ ಸಚಿವ ಸಂಪುಟ ಅಸ್ತಿತ್ವಕ್ಕೆ ಬರಬಹುದು ಎಂದು ಮೂಲಗಳು ಹೇಳಿವೆ.
ಲೋಕೋಪಯೋಗಿ ಇಲಾಖೆಯ ಜೊತೆಗೆ ಇಂಧನ ಖಾತೆಗಾಗಿ ಎಚ್.ಡಿ.ರೇವಣ್ಣ ಪಟ್ಟುಹಿಡಿದಿದ್ದಾರೆ ಎನ್ನಲಾಗಿದೆ. ಇಂಧನ ಖಾತೆ ಬಿಟ್ಟುಕೊಡಲು ಡಿ.ಕೆ.ಶಿವಕುಮಾರ್ ಒಪ್ಪುತ್ತಿಲ್ಲ. ಇದರ ಜೊತೆಗೆ ಕಾಂಗ್ರೆಸ್ನ ಬಹುತೇಕ ನಾಯಕರು ಸಚಿವ ಸ್ಥಾನಕ್ಕೆ ಪಟ್ಟುಹಿಡಿದಿದ್ದು ಆಕಾಂಕ್ಷಿಗಳನ್ನು ಸಮಾಧಾನಪಡಿಸಲು ವರಿಷ್ಠರು ಬುದ್ಧಿ ಖರ್ಚು ಮಾಡುತ್ತಿದ್ದಾರೆ.
ಕಾಂಗ್ರೆಸ್ ಮತ್ತು ಜೆಡಿಎಸ್ನ ಪ್ರಮುಖ ನಾಯಕರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮನೆಗೆ ಎಡತಾಕುತ್ತಿದ್ದಾರೆ. ದೇವೇಗೌಡರ ಮನೆಯಲ್ಲಿಯೇ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ವೇಣುಗೋಪಾಲ್ ಪರಸ್ಪರ ಭೇಟಿಯಾಗಿ, ಚರ್ಚಿಸಲಿದ್ದಾರೆ. ನಂತರ ಸಂಭಾವ್ಯ ಸಚಿವರ ಪಟ್ಟಿ ಬಿಡುಗಡೆಯಾಗಲಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.