ADVERTISEMENT

ರಾಜ್ಯ ಸರ್ಕಾರಕ್ಕೆ ತಿಳಿವಳಿಕೆ ಕೊರತೆ

ಅಶ್ವಿನಿ ವೈ.ಎಸ್.
Published 15 ಸೆಪ್ಟೆಂಬರ್ 2011, 19:35 IST
Last Updated 15 ಸೆಪ್ಟೆಂಬರ್ 2011, 19:35 IST

ಬೆಂಗಳೂರು: ವಿಶ್ವಪರಂಪರೆ ಪಟ್ಟಿಗೆ ರಾಜ್ಯದ ಪಶ್ಚಿಮ ಘಟ್ಟಗಳನ್ನು ಸೇರಿಸಲು ಸರ್ಕಾರ ವಿಳಂಬ ಮಾಡಿದ್ದಕ್ಕೆ ಕಾರಣ, ಆ ಬಗ್ಗೆ ಇರುವ ಮಾಹಿತಿ ಕೊರತೆ ಎಂದು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ಹೆಚ್ಚುವರಿ ಮಹಾ ನಿರ್ದೇಶಕ (ವನ್ಯಜೀವಿ) ಜಗದೀಶ್ ಕಿಶ್ವಾನ್ ಅಭಿಪ್ರಾಯಪಟ್ಟಿದ್ದಾರೆ.

ನಗರದ ಮಲ್ಲೇಶ್ವರದ ಅರಣ್ಯ ಭವನದಲ್ಲಿ ಗುರುವಾರ ನಡೆದ ಪಶ್ಚಿಮ ಘಟ್ಟಗಳ ನಿರ್ವಹಣಾ ಸಮಿತಿ ಸಭೆಯ ಬಳಿಕ `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಅವರು, `ಪಶ್ಚಿಮ ಘಟ್ಟ ಸೇರ್ಪಡೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಸೇರ್ಪಡೆಯ ಬಗೆಗಿನ ತಿಳಿವಳಿಕೆಯ ಕೊರತೆಯಿಂದ. ಈ ಬಗ್ಗೆ ಮನವೊಲಿಸಲು ಕೇಂದ್ರ ಸರ್ಕಾರ ಯತ್ನಿಸಿದ್ದರೂ ಅದು ಫಲ ನೀಡದೇ ಇರುವುದು ಇದೇ ಕಾರಣದಿಂದ~ ಎಂದರು.

`ಮೊದಲು ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಈ ಬಗ್ಗೆ ತಿಳಿವಳಿಕೆಯನ್ನು ನೀಡುವ ಸಲುವಾಗಿ ಸಭೆಯನ್ನು ಏರ್ಪಡಿಸಲಾಗಿತ್ತು. ಮುಂಬರುವ ದಿನಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಬಗ್ಗೆ ಮಾತುಕತೆ ನಡೆಸಲು ವೇದಿಕೆಯನ್ನು ಸಿದ್ಧಗೊಳಿಸುವುದೂ ಸಹ ಸಭೆಯ ಉದ್ದೇಶವಾಗಿತ್ತು~ ಎಂದು ಹೇಳಿದರು.

`ಪಶ್ಚಿಮಘಟ್ಟಗಳನ್ನು ವಿಶ್ವಪರಂಪರೆ ಪಟ್ಟಿಯಲ್ಲಿ ಸೇರಿಸುವುದರಿಂದ ಹೆಚ್ಚುವರಿ ನಿರ್ಬಂಧ ವಿಧಿಸಲಾಗುತ್ತದೆ ಎಂಬ ರಾಜ್ಯ ಸರ್ಕಾರದ ಗ್ರಹಿಕೆ ನಿರಾಧಾರವಾಗಿದ್ದು, ಈ ಬಗ್ಗೆ ಸರ್ಕಾರದ ಮನವೊಲಿಸುವ ಎಲ್ಲ ಪ್ರಯತ್ನಗಳನ್ನೂ ಕೇಂದ್ರ ಮಾಡಲಿದೆ~ ಎಂದು ಭರವಸೆ ನೀಡಿದರು.

`ಈ ಸಭೆಯಲ್ಲಿ ಅಧಿಕಾರಿಗಳು ನಮ್ಮ ಅಭಿಪ್ರಾಯಕ್ಕೆ ಮನ್ನಣೆ ನೀಡಿದ್ದಾರೆ. ನಂತರ ಅರಣ್ಯ ಇಲಾಖೆಯ ಕಾರ್ಯದರ್ಶಿಗಳ ಮನ ವೊಲಿಸಲಾಗುವುದು~ ಎಂದರು.

2012ರಲ್ಲಿ ಸಭೆ ಸೇರಲಿರುವ ವಿಶ್ವಪರಂಪರೆ ಸಮಿತಿಯ ಪ್ರಶ್ನೆಗಳಿಗೆ ಕಿಶ್ವಾನ್ ಉತ್ತರಿಸಲಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, `ಸಮಿತಿ ಕೇಳಿದ ಪ್ರಶ್ನೆಗಳಿಗೆ ಈ ವರ್ಷದ ಒಳಗಾಗಿ ಸ್ಪಷ್ಟನೆಗಳನ್ನು ಕಳುಹಿಸಲಿದ್ದೇವೆ~ ಎಂದರು.

ಕೇಂದ್ರ ಸಚಿವೆಯಿಂದ ರಾಜ್ಯಕ್ಕೆ ಪತ್ರ
ವಿಶ್ವಪರಂಪರೆ ಪಟ್ಟಿಗೆ ರಾಜ್ಯದ ಪಶ್ಚಿಮ ಘಟ್ಟಗಳನ್ನು ಸೇರಿಸುವಂತೆ ಅಂದು ಕೇಂದ್ರ ಪರಿಸರ ಸಚಿವರಾಗಿದ್ದ ಜೈರಾಂ ರಮೇಶ್ ಅವರು ರಾಜ್ಯಕ್ಕೆ ಪತ್ರ ಬರೆದಿದ್ದರು. ಆ ನಂತರ ಇದೀಗ ಆ ಖಾತೆ ಸಚಿವೆಯಾಗಿರುವ ಜಯಂತಿ ನಟರಾಜನ್ ಅವರು ಇದೇ ಸೆ.6ರಂದು ಇದೇ ವಿಷಯ ಕುರಿತು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಆ ಪತ್ರದ ಸಾರಾಂಶ ಹೀಗಿದೆ. ಜಾಗತಿಕವಾಗಿ ಒಂದು ಪ್ರದೇಶಕ್ಕೆ ವಿಶ್ವಪರಂಪರೆ ಪಟ್ಟಿಯಲ್ಲಿ ಸ್ಥಾನ ದೊರೆಯುವುದು, ಅದನ್ನು ಸಂರಕ್ಷಣೆ ಮಾಡುವ ಅವಶ್ಯಕತೆ ಮತ್ತು ಅದರ ಮಹತ್ವವನ್ನು ತಿಳಿಸುತ್ತದೆ. ಈ ಸೇರ್ಪಡೆಯಿಂದ ಭಾರತದ ಸಾಮರ್ಥ್ಯ ಮತ್ತು ಇಂಥ ಸ್ಥಳಗಳ ಸಂರಕ್ಷಣೆಗೆ ಜಾಗತಿಕ ಮಟ್ಟದಲ್ಲಿ ನಾಯಕತ್ವ ಸ್ಥಾನವನ್ನು ಭಾರತ ಗಳಿಸಿಕೊಳ್ಳಲಿದೆ.

ಈ ಸೇರ್ಪಡೆಯಿಂದಾಗಿ ಯುನೆಸ್ಕೊ ಯಾವುದೇ ಕಾನೂನುಗಳನ್ನು ನಮ್ಮ ಮೇಲೆ ಹೇರುವುದಿಲ್ಲ. ಬದಲಾಗಿ ನಮ್ಮ ದೇಶದ ಕಾನೂನುಗಳೇ ಪ್ರಧಾನವಾಗಿರುತ್ತವೆ. ಈ 39 ಸ್ಥಳಗಳಲ್ಲಿರುವ ಬುಡಕಟ್ಟು ಸಮುದಾಯಕ್ಕೆ ಇದರಿಂದ ಯಾವುದೇ ಧಕ್ಕೆಯೂ ಆಗುವುದಿಲ್ಲ. ಆದ್ದರಿಂದ ದೇಶದ 39 ಸ್ಥಳಗಳನ್ನು ವಿಶ್ವಪರಂಪರೆ ಪಟ್ಟಿಗೆ ಸೇರಿಸಲು ನಿಮ್ಮ ತುಂಬು ಹೃದಯದ ಸಹಕಾರವನ್ನು ಬಯಸುತ್ತೇವೆ~ ಎಂದು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ಜೈರಾಂ ರಮೇಶ್ ಅವರು ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಬರೆದಿದ್ದ ಪತ್ರದಲ್ಲಿ, ರಾಜ್ಯ ಸರ್ಕಾರದ ನಿರ್ಧಾರದಿಂದ ಭಾರತಕ್ಕೆ ಜಾಗತಿಕ ಮಟ್ಟದಲ್ಲಿ ಮುಜುಗರದ ಸನ್ನಿವೇಶ ಉಂಟಾಗಲಿದೆ ಎಂದು ಕಟುವಾಗಿ ತಿಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.