ರಾಯಚೂರು: ನಟ ರಜನಿಕಾಂತ್ ಅಭಿನಯದ ‘ಕಾಲಾ’ ಚಿತ್ರ ಪ್ರದರ್ಶನದ ವಿರುದ್ಧ ಕನ್ನಡಪರ ಸಂಘಟನೆಗಳು ಜಿಲ್ಲೆಯಲ್ಲಿ ಪ್ರತಿಭಟನೆ ಆರಂಭಿಸಿದ್ದರಿಂದ ಚಿತ್ರಮಂದಿರ ಮಾಲೀಕರು ಚಿತ್ರ ಪ್ರದರ್ಶನ ಸ್ಥಗಿತಗೊಳಿಸಿದ್ದಾರೆ.
ಸಿಂಧನೂರಿನ ‘ಸಂಗಮೇಶ್ವರ ಟಾಕೀಸ್’ನಲ್ಲಿ ಕಾಲ ಪ್ರದರ್ಶನ ರದ್ದಾಗಿದೆ. ಚಿತ್ರದ ಪೋಸ್ಟರ್ ಹರಿದು ಹಾಕಿ ಕನ್ನಡಪರ ಕಾರ್ಯಕರ್ತರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಯಚೂರಿನ ‘ಪದ್ಮನಾಭ’ ಚಿತ್ರಮಂದಿರದಲ್ಲಿ ಮುಂಚೆಯೇ ಟಿಕೆಟ್ ವಿತರಿಸಲಾಗಿತ್ತು. ಬೆಳಗಿನ ಪ್ರದರ್ಶನ ವೀಕ್ಷಿಸಲು ಚಿತ್ರ ಮಂದಿರದತ್ತ ಪ್ರೇಕ್ಷಕರು ಬರಲಾರಂಭಿಸಿದ್ದರು. ಆದರೆ, ವಿವಿಧೆಡೆ ಚಿತ್ರದ ವಿರುದ್ಧ ಪ್ರತಿಭಟನೆ ನಡೆಯುತ್ತಿರುವ ಮಾಹಿತಿಯಿಂದ ಎಚ್ಚೆತ್ತುಕೊಂಡ ಚಿತ್ರಮಂದಿರ ಮಾಲೀಕರು ಪ್ರದರ್ಶನ ರದ್ದುಗೊಳಿಸಿದರು.
ಮಾನ್ವಿಯ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿ ಚಿತ್ರ ಪ್ರದರ್ಶಿಸದಂತೆ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಪೊಲೀಸರಿಂದ ರಕ್ಷಣೆ ಪಡೆದು ಸಂಜೆಯಿಂದ ಪ್ರದರ್ಶನ ಅರಂಭ ಮಾಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.