ADVERTISEMENT

ರೂ 68,000 ಮೌಲ್ಯದ ಗಡಿಯಾರ ವಶ

ಆಂಧ್ರಪ್ರದೇಶ ಚುನಾವಣೆ: ಮತದಾರರಿಗೆ ಆಮಿಷ ಆರೋಪ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2014, 19:30 IST
Last Updated 20 ಮಾರ್ಚ್ 2014, 19:30 IST

ಬಳ್ಳಾರಿ: ನಗರದ ಟ್ರಾವೆಲ್ಸ್‌ ಏಜೆನ್ಸಿ ಕಚೇರಿ ಮೇಲೆ ಗುರುವಾರ ಮಧ್ಯಾಹ್ನ ದಾಳಿ ನಡೆಸಿದ ಪೊಲೀಸರು, ಸುಮಾರು 68,000 ಮೌಲ್ಯದ ಗೋಡೆ ಗಡಿ­ಯಾರಗಳನ್ನು ವಶಪಡಿಸಿಕೊಂಡಿದ್ದಾರೆ. ನೆರೆಯ ಆಂಧ್ರಪ್ರದೇಶದಲ್ಲಿ ನಡೆಯ­ಲಿರುವ ನಗರ ಸ್ಥಳೀಯ ಸಂಸ್ಥೆ, ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಮತದಾರರಿಗೆ ಹಂಚಲು ಇವನ್ನು ಕೊಂಡೊಯ್ಯ­ಲಾಗುತ್ತಿತ್ತು ಎಂದು ಆರೋಪಿಸಲಾಗಿದೆ.

ಮೋತಿ ವೃತ್ತ ಬಳಿಯ ಬಳ್ಳಾರಿ ನಗರಾಭಿವೃದ್ದಿ ಪ್ರಾಧಿಕಾರದ ವಾಣಿಜ್ಯ ಸಂಕೀರ್ಣದಲ್ಲಿರುವ ಇಂದಿರಾ ಟ್ರಾವೆಲ್ಸ್ ಕಚೇರಿಯಲ್ಲಿ ಗೋಡೆ ಗಡಿಯಾರವಿರುವ 10 ಪೆಟ್ಟಿಗೆಗಳು (680 ಗಡಿಯಾರ) ಪತ್ತೆಯಾಗಿವೆ. ಇವುಗಳ ಮೌಲ್ಯ ಒಟ್ಟು ₨ 68,000.

ವೈಎಸ್ಆರ್ ಕಾಂಗ್ರೆಸ್‌ ಪಕ್ಷದ ಚಿಹ್ನೆ, ಮುಖಂಡ ಜಗನ್‌ ಮೋಹನ­ರೆಡ್ಡಿ  ಹಾಗೂ ರಾಯದುರ್ಗ ವಿಧಾನ­ಸಭಾ ಕ್ಷೇತ್ರದ ಅಭ್ಯರ್ಥಿ ಕಾಪು ರಾಮ­ಚಂದ್ರ ರೆಡ್ಡಿ ಅವರ ಭಾವಚಿತ್ರ ಇರುವ ಗೋಡೆ ಗಡಿಯಾರಗಳನ್ನು ಈ ಪೆಟ್ಟಿಗೆ­ಗಳಲ್ಲಿ ಇರಿಸಿ, ಬಸ್‌ನಲ್ಲಿ ಸಾಗಿಸ­ಲಾಗುತ್ತಿತ್ತು ಎಂದು ದಾಳಿಯ ನೇತೃತ್ವ ವಹಿಸಿದ್ದ ಡಿವೈಎಸ್‌ಪಿ ಟಿ.ಎಸ್‌. ಮುರುಗಣ್ಣನವರ್‌ ತಿಳಿಸಿದ್ದಾರೆ. ಹವಂಭಾವಿಯಲ್ಲಿರುವ, ಅಭ್ಯರ್ಥಿ ರಾಮಚಂದ್ರರೆಡ್ಡಿ ಅವರ ನಿವಾಸ­ದಲ್ಲೂ ಶೋಧ ನಡೆಸಲಾಗಿದೆ  ಎಂದು  ಹೇಳಿದ್ದಾರೆ.

ಸೀರೆ, ಕ್ರಿಕೆಟ್‌ ಬ್ಯಾಟ್‌, ಚೆಕ್‌ ವಶ: ಆಂಧ್ರದ ರಾಯದುರ್ಗ ವಿಧಾನಸಭೆ ಕ್ಷೇತ್ರದ ವೈಎಸ್ಆರ್‌ ಕಾಂಗ್ರೆಸ್‌ ಅಭ್ಯರ್ಥಿ ಕಾಪು ರಾಮಚಂದ್ರ ರೆಡ್ಡಿ ಅವರ ಬಳ್ಳಾರಿ ನಿವಾಸದ ಮೇಲೆ ಹೆಚ್ಚುವರಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಗುರುವಾರ ಸಂಜೆ ದಾಳಿ ನಡೆಸಿರುವ ಪೊಲೀಸರು, ಸೀರೆ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಒಂದು ಸಾವಿರ ಸೀರೆ, 25 ಕ್ರಿಕೆಟ್‌ ಬ್ಯಾಟ್‌, 90 ಸ್ಟಂಪ್‌, 13 ಅಡುಗೆ ಕುಕ್ಕರ್‌ ಹಾಗೂ ₨ 43 ಲಕ್ಷ ನಮೂದಿಸಿದ್ದ ಮೂರು ಚೆಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಮತದಾರರಿಗೆ ಆಮಿಷ ಒಡ್ಡಲು ಇವುಗಳನ್ನು ದಾಸ್ತಾನು ಮಾಡಲಾಗಿತ್ತು ಎಂದು ಆರೋಪಿಸಲಾಗಿದೆ.
ದಾಳಿಯ ಸಂದರ್ಭ ರಾಮಚಂದ್ರ ರೆಡ್ಡಿ ಇರಲಿಲ್ಲ. ಈ ಕುರಿತು ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.