ADVERTISEMENT

ರೈತ ಸಂಘದಲ್ಲಿ ಬಂಡಾಯ ಸ್ಫೋಟ: ಭಿನ್ನರ ಸಭೆ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2014, 19:30 IST
Last Updated 27 ಮಾರ್ಚ್ 2014, 19:30 IST
ಶ್ರೀರಂಗಪಟ್ಟಣದಲ್ಲಿ ಗುರುವಾರ ನಡೆದ ರೈತ ಸಂಘದ ಭಿನ್ನರ ಗುಂಪಿನ ಸಭೆಯಲ್ಲಿ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಮೇಳಾಪುರ ಸ್ವಾಮಿಗೌಡ ಮಾತನಾಡಿದರು.
ಶ್ರೀರಂಗಪಟ್ಟಣದಲ್ಲಿ ಗುರುವಾರ ನಡೆದ ರೈತ ಸಂಘದ ಭಿನ್ನರ ಗುಂಪಿನ ಸಭೆಯಲ್ಲಿ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಮೇಳಾಪುರ ಸ್ವಾಮಿಗೌಡ ಮಾತನಾಡಿದರು.   

ಶ್ರೀರಂಗಪಟ್ಟಣ: ಪ್ರಸಕ್ತ ಲೋಕಸಭೆ ಚುನಾ­ವಣೆ­ಯಲ್ಲಿ ರೈತ ಮುಖಂಡರು ಕೈಗೊಂಡಿ­ರುವ ರಾಜ­ಕೀಯ ತೀರ್ಮಾ­ನ­ಗಳು, ತಾಲ್ಲೂಕು ಘಟಕದ ಪದಾ­ಧಿ­­ಕಾರಿಗಳ ಧೋರಣೆಯನ್ನು ವಿರೋ­­ಧಿಸಿ ಸಂಘದ ಭಿನ್ನಮತೀಯರು ಗುರುವಾರ ಪ್ರತ್ಯೇಕ ಸಭೆ ನಡೆ­ಸುವ ಮೂಲಕ ಬಂಡಾಯದ ಬಾವುಟ ಹಾರಿಸಿದ್ದಾರೆ.

ರೈತ ಸಂಘದ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಮೇಳಾ­ಪುರ ಸ್ವಾಮಿ­ಗೌಡ, ಪ್ರಧಾನ ಕಾರ್ಯದರ್ಶಿ ಡಿ.ಎಸ್‌.­ ­ಚಂದ್ರಶೇಖರ್‌, ತಾಲ್ಲೂಕು ಪಂಚಾ­ಯಿತಿ ಮಾಜಿ ಸದಸ್ಯ ಮಂಜೇಶ್‌­ಗೌಡ, ಖಜಾಂಚಿ ನಾಗೇಂದ್ರ­ಸ್ವಾಮಿ, ಕೆ. ಶೆಟ್ಟಹಳ್ಳಿ ಶ್ರೀಕಂಠಯ್ಯ, ತಡಗವಾಡಿ ದೇವೇಗೌಡ, ಬನ್ನಹಳ್ಳಿ ಚನ್ನೇಗೌಡ, ಅರಕೆರೆ ಪುಟ್ಟಸ್ವಾಮಿ ಇತರರು ಇಲ್ಲಿನ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯ ಆವರಣದಲ್ಲಿ ಪ್ರತ್ಯೇಕ ಸಭೆ ನಡೆಸಿದರು.

ರೈತ ಸಂಘದ ಮುಖಂಡರು ತೆಗೆದು­ಕೊಳ್ಳು­ತ್ತಿರುವ ರಾಜಕೀಯ ತೀರ್ಮಾನ­ಗಳು ಸಂಘದ ಮೂಲ ಆಶಯಕ್ಕೆ ವಿರು­ದ್ಧ­ವಾಗಿವೆ. ಪ್ರೊ.ಎಂ.ಡಿ. ನಂ­ಜುಂ­ಡ­­­ಸ್ವಾಮಿ, ಸುಂದರೇಶ್‌, ರುದ್ರಪ್ಪ ಅವರಂತಹ ಹೋರಾಟ­ಗಾ­ರ­ರು ರೂಪಿ­ಸಿದ ಸಂವಿಧಾನವನ್ನು ಗಾ­ಳಿಗೆ ತೂರ­ಲಾ­ಗು­ತ್ತಿದೆ. ಅನುಕೂಲ­ಸಿಂಧು ರಾಜಕೀಯ ನಿರ್ಣ­ಯ­­ಗಳನ್ನು ತೆಗೆದುಕೊಳ್ಳ­ಲಾಗು­ತ್ತಿದೆ ಎಂದು ಮೇಳಾಪುರ ಸ್ವಾಮಿಗೌಡ ಅಸಮಾಧಾನ ವ್ಯಕ್ತಪಡಿಸಿದರು.

ಲೋಕಸಭೆ ಉಪ ಚುನಾವಣೆ ಮತ್ತು ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯನ್ನು ಬೆಂಬಲಿ­ಸುವ ಬಗ್ಗೆ ಕಾರ್ಯಕರ್ತರ ಅಭಿಪ್ರಾಯ ಕೇಳದೆ ಮುಖಂಡರು ಏಕಮುಖ ತೀರ್ಮಾನ ಕೈಗೊಂಡಿದ್ದಾರೆ. ಈ ಹಿಂದೆ ಯಡಿ­ಯೂರಪ್ಪ ಅವರು ಮೈಸೂರಿ­ನಿಂದ ಬೆಂಗಳೂರಿಗೆ ಪಾದಯಾತ್ರೆ ನಡೆ­ಸಿದ ಸಂದರ್ಭದಲ್ಲಿ ರಾಜ್ಯ ಸಮಿತಿಗೆ ವಿರುದ್ಧವಾಗಿ ಅವರಿಗೆ ಬೆಂಬಲ ನೀಡಿ­ದ್ದಾರೆ.

ರೈತ ಸಂಘದಲ್ಲಿ ಸದ್ಯ ಆಂತರಿಕ ಪ್ರಜಾಪ್ರಭುತ್ವ ಇಲ್ಲದೇ ಇರುವುದರಿಂದ ಸಂಘದ ಮೂಲ ಆಶಯದಂತೆ ರಾಜಕೀಯ ಮುಕ್ತವಾದ ಸಂಘಟನೆ­ಯನ್ನು ರೂಪಿಸಲು ಸಭೆ ನಡೆಸ­ಲಾಗು­ತ್ತಿದೆ. ಇನ್ನೆರಡು ದಿನಗಳಲ್ಲಿ ಎಲ್ಲ ತಾಲ್ಲೂಕು­­ಗಳ ಅತೃಪ್ತರ ಸಭೆಯನ್ನು ಮಂಡ್ಯದಲ್ಲಿ ನಡೆಸಲಾಗುವುದು. ಅಗತ್ಯಬಿದ್ದರೆ ಪ್ರತ್ಯೇಕ ಸಂಘವನ್ನು ಅಸ್ತಿತ್ವಕ್ಕೆ ತರಲಾಗುವುದು ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಮಂಜೇಶ್‌ಗೌಡ ತಿಳಿಸಿದರು.

ನಾಗೇಂದ್ರ­ಸ್ವಾಮಿ ಖಂಡನಾ ನಿರ್ಣಯ ಮಂಡಿಸಿ­ದರು. ಟಿ.ಸಿ. ದೇವೇಗೌಡ, ದೊಡ್ಡ­ಪಾಳ್ಯ ಚಂದ್ರು, ಮಹೇಶ್‌, ಜಗದೀಶ್‌, ಕೆ.ಶೆಟ್ಟಹಳ್ಳಿ ಶಿವರಾಂ, ಸಿದ್ದರಾಮು, ಬಲ್ಲೇನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ತಮ್ಮಣ್ಣೇಗೌಡ, ಗ್ರಾಮ ಪಂಚಾಯಿತಿ ಸದಸ್ಯ ಮಲ್ಲೇಗೌಡ ಸಭೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.