ADVERTISEMENT

ಲಲಿತಕಲಾ ಅಕಾಡೆಮಿ ಹೆಸರು ಬದಲಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2012, 19:30 IST
Last Updated 10 ಏಪ್ರಿಲ್ 2012, 19:30 IST

ಬೆಂಗಳೂರು: ಕರ್ನಾಟಕ ಲಲಿತಕಲಾ ಅಕಾಡೆಮಿಯ ಹೆಸರನ್ನು `ದೃಶ್ಯಕಲಾ ಅಕಾಡೆಮಿ~ ಎಂದು ಬದಲಾಯಿಸುವಂತೆ ಸರ್ಕಾರವನ್ನು ಕೋರಲಾಗುವುದು ಎಂದು ಅಕಾಡೆಮಿಯ ನೂತನ ಅಧ್ಯಕ್ಷ ಚಿ.ಸು. ಕೃಷ್ಣಶೆಟ್ಟಿ ಹೇಳಿದರು.

ಅಕಾಡೆಮಿ ಆರಂಭವಾದ ಕಾಲದಲ್ಲಿ ಬೇರೆ ಬೇರೆ ಕಲೆಗಳನ್ನು ತನ್ನ ವ್ಯಾಪ್ತಿಗೆ ಒಳಗೊಳ್ಳಲಿ ಎಂಬ ಉದ್ದೇಶದಿಂದ `ಲಲಿತಕಲಾ~ ಎಂಬ ಹೆಸರು ಇಡಲಾಗಿತ್ತು. ಆದರೆ ಕಾಲಾನಂತರ ವಿವಿಧ ಕಲಾಪ್ರಕಾರಗಳಿಗೆ ಪ್ರತ್ಯೇಕ ಅಕಾಡೆಮಿಗಳನ್ನು ಸ್ಥಾಪಿಸಲಾಯಿತು. ದೃಶ್ಯಕಲೆಗಳಿಗೆ ಹೆಚ್ಚಿನ ಆದ್ಯತೆ ನೀಡುವ ದೃಷ್ಟಿಯಿಂದ `ಲಲಿತಕಲಾ ಅಕಾಡೆಮಿ~ಯ ಹೆಸರನ್ನು ದೃಶ್ಯಕಲಾ ಅಕಾಡೆಮಿಯೆಂದು ಬದಲಾಯಿಸಬೇಕು ಎಂದು ಅವರು ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

`ಅಕಾಡೆಮಿಗೆ ಸದಸ್ಯರ ನೇಮಕ ಆದಾಗ ಮಾತ್ರ ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಲು ಸಾಧ್ಯ. ಸರ್ಕಾರ ನನ್ನ ಜೊತೆ ಚರ್ಚಿಸಿ ಸದಸ್ಯರನ್ನು ಶೀಘ್ರ ನೇಮಕ ಮಾಡಬೇಕು. ಅಕಾಡೆಮಿಯ ಕಾರ್ಯಕ್ರಮಗಳ ಮೇಲೆ ಕಣ್ಗಾವಲಿಡಲು ಹಿರಿಯ ಕಲಾವಿದರನ್ನು ಒಳಗೊಂಡ ಸಲಹಾ ಸಮಿತಿ ರಚಿಸಲಾಗುವುದು~ ಎಂದು ಅವರು ತಿಳಿಸಿದರು.

ವೆಬ್‌ಸೈಟ್: ರಾಜ್ಯದ ಕಲಾವಿದರ ಮಾಹಿತಿ, ಅಕಾಡೆಮಿಯ ವಿವಿಧ ಚಟುವಟಿಕೆಗಳ ಬಗ್ಗೆ ವಿವರಣೆ, ರಾಜ್ಯದ ಸಾಂಪ್ರದಾಯಿಕ ಕಲೆಗಳ ಇತಿಹಾಸದ ಬಗ್ಗೆ ಮಾಹಿತಿ, ಅಕಾಡೆಮಿಯ ಜೊತೆ ನೇರ ಸಂವಾದ ನಡೆಸಲು ಅನುಕೂಲವಾಗುವಂತೆ ವೆಬ್‌ಸೈಟ್ ಒಂದನ್ನು ಶೀಘ್ರ ಆರಂಭಿಸುವ ಚಿಂತನೆಯೂ ಇದೆ ಎಂದರು.
ಜನಸಾಮಾನ್ಯರನ್ನು ಸಮಕಾಲೀನ ಕಲೆಗಳತ್ತ ಆಕರ್ಷಿಸಲು ರಾಜ್ಯದ ಎಲ್ಲೆಡೆ ಕಾರ್ಯಾಗಾರ ಹಮ್ಮಿಕೊಳ್ಳುವುದು ಎಂದು ತಿಳಿಸಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.