ADVERTISEMENT

ಲೋಕಪಾಲ ಮಸೂದೆ: ಸಿವಿಸಿ, ಸಿಬಿಐ ಅಭಿಪ್ರಾಯ...

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2011, 19:30 IST
Last Updated 1 ಅಕ್ಟೋಬರ್ 2011, 19:30 IST

ನವದೆಹಲಿ, (ಪಿಟಿಐ):  ಅಣ್ಣಾ ಹಜಾರೆ ತಂಡದ ಸಲಹೆಗಳನ್ನು ಮಾನ್ಯ ಮಾಡಿ ತಮ್ಮ ಸಂಸ್ಥೆಗಳ ದಿನನಿತ್ಯದ ಕೆಲಸಗಳಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಸಿಬಿಐ ನಿರ್ದೇಶಕ ಎ.ಪಿ. ಸಿಂಗ್ ಮತ್ತು ಕೇಂದ್ರ ಜಾಗೃತ ಆಯೋಗದ ಆಯುಕ್ತ ಪ್ರದೀಪ್ ಕುಮಾರ್ ಸಂಸದೀಯ ಸ್ಥಾಯಿ ಸಮಿತಿಗೆ ತಿಳಿಸಿದ್ದಾರೆ.

ಸಿಬಿಐ ನಿರ್ದೇಶಕ ಮತ್ತು ಸಿವಿಸಿ ಆಯುಕ್ತರನ್ನು ಲೋಕಪಾಲ ವ್ಯವಸ್ಥೆಯ ಅಧಿಕಾರೇತರ ಸದಸ್ಯರನ್ನಾಗಿ ಮಾಡಬೇಕು. ತನಿಖಾ ಸಂಸ್ಥೆಗಳ ಮುಖ್ಯಸ್ಥರನ್ನು ಅಧಿಕಾರೇತರ ಸದಸ್ಯರನ್ನಾಗಿ ಮಾಡುವುದರಿಂದ ಭ್ರಷ್ಟಾಚಾರ ತನಿಖೆಯ ವಿಚಾರದಲ್ಲಿ ಸಮನ್ವಯತೆ ಸಾಧಿಸಬಹುದು ಎಂದು ಎಂದು ಇವರು ಸಲಹೆ ನೀಡಿದರು.

ಸಿಬಿಐನ ಭ್ರಷ್ಟಾಚಾರ ವಿರೋಧಿ ವಿಭಾಗವನ್ನು ಲೋಕಪಾಲ ವ್ಯವಸ್ಥೆಯಡಿ ತಂದರೆ ತನಿಖೆಯನ್ನು ಪರಿಣಾಮಕಾರಿಯಾಗಿ ನಡೆಸಲು ಸಾಧ್ಯವಾಗುವುದಿಲ್ಲ ಎಂದು ಸಿಂಗ್ ಹೇಳಿದರು.

ಭ್ರಷ್ಟಾಚಾರ ಪ್ರಕರಣಗಳ ತನಿಖೆಯ ಒಟ್ಟಾರೆ ಮೇಲ್ವಿಚಾರಣೆ ಅಧಿಕಾರ ಲೋಕಪಾಲ ವ್ಯವಸ್ಥೆಗೆ ಇರಲಿ. ಇದಲ್ಲದೆ ತಮ್ಮ ಸಂಸ್ಥೆಯ ಹಣಕಾಸು, ಕಾನೂನು ಮತ್ತು ಆಡಳಿತಕ್ಕೆ ಸಂಬಂಧಿಸಿದ ಅಗತ್ಯ ಪೂರೈಸುವ ಅಧಿಕಾರ ಲೋಕಪಾಲರಿಗೆ ಇರಲಿ ಎಂದು ಸಿಬಿಐ ನಿರ್ದೇಶಕ ಸಿಂಗ್ ಸಲಹೆ ಮಾಡಿದ್ದಾರೆ.

ಸಿಬಿಐ ನಿರ್ದೇಶಕರ ಅಧಿಕಾರಾವಧಿ ಐದು ವರ್ಷಗಳದ್ದಾಗಿರಬೇಕು ಅಥವಾ 65 ವರ್ಷದವರೆಗೆ ಅಧಿಕಾರದಲ್ಲಿರಲು ಅವಕಾಶವಿರಬೇಕು. ಈ ಎರಡರಲ್ಲಿ ಯಾವುದು ಮೊದಲೋ ಅದನ್ನು ಜಾರಿ ಮಾಡಬೇಕು. ಲೋಕಪಾಲ ಸಂಸ್ಥೆಯಲ್ಲಿ ಪ್ರತ್ಯೇಕ ತನಿಖಾ ವಿಭಾಗ ರಚಿಸಿದರೆ ಸಿಬಿಐನ ಈಗಿನ ಕೆಲಸಕ್ಕೆ ಧಕ್ಕೆ ಉಂಟಾಗುತ್ತದೆ ಎಂಬುದು ಅವರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.