ಬೆಂಗಳೂರು: ಸ್ವಾತಂತ್ರ್ಯೋತ್ಸವದ ಅಂಗವಾಗಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಗೌರವ ರಕ್ಷೆ ಸ್ವೀಕರಿಸುತ್ತಿದ್ದಾಗ, `ಕರ್ನಾಟಕ ಜಾಗೃತಿ ಜನಾಂದೋಲನ~ ಸಂಘಟನೆಯ ಸದಸ್ಯ ಜಯಕುಮಾರ ಹಿರೇಮಠ, `ಲೋಕಾಯುಕ್ತರನ್ನು ಶೀಘ್ರ ನೇಮಕ ಮಾಡಿ~ ಎಂಬ ಒಕ್ಕಣೆ ಇರುವ ಕರಪತ್ರಗಳನ್ನು ತೂರಿದ ಘಟನೆ ಬುಧವಾರ ನಡೆಯಿತು.
ಇಲ್ಲಿನ ಫೀಲ್ಡ್ ಮಾರ್ಷಲ್ ಮಾಣೆಕ್ ಷಾ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದ ಶೆಟ್ಟರ್ ಅವರು, ಗೌರವ ರಕ್ಷೆ ಸ್ವೀಕರಿಸುತ್ತಿದ್ದರು. ಈ ಸಂದರ್ಭದಲ್ಲಿ ಗಣ್ಯ ವ್ಯಕ್ತಿಗಳಿಗೆ ನಿಗದಿ ಮಾಡಿದ್ದ ಗ್ಯಾಲರಿಯಲ್ಲಿ ಕುಳಿತಿದ್ದ ಹಿರೇಮಠ ಅವರು, ಕರಪತ್ರಗಳನ್ನು ಎಸೆದರು. ಲೋಕಾಯುಕ್ತ ಹುದ್ದೆಗೆ ಸೂಕ್ತ ವ್ಯಕ್ತಿಯನ್ನು ನೇಮಿಸಿಲ್ಲ ಎಂದು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಪೊಲೀಸರು ಹಿರೇಮಠ ಅವರನ್ನು ತಕ್ಷಣ ವಶಕ್ಕೆ ತೆಗೆದುಕೊಂಡರು. ನಂತರ ಅವರನ್ನು ಬಿಡುಗಡೆ ಮಾಡಲಾಯಿತು.
ಬಿಗಿ ಭದ್ರತೆ: ಮಾಣೆಕ್ ಷಾ ಮೈದಾನದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಮೈದಾನ ಪ್ರವೇಶಿಸುವ ಎಲ್ಲರನ್ನೂ ಪೊಲೀಸರು ತಪಾಸಣೆಗೆ ಒಳಪಡಿಸಿ, ಗ್ಯಾಲರಿಗೆ ಬಿಡುತ್ತಿದ್ದರು. ಪಾಸ್ ಇರದವರಿಗೆ ಪ್ರವೇಶ ಇರಲಿಲ್ಲ. ಅಲ್ಲಲ್ಲಿ ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಲಾಗಿತ್ತು.
ಮೈದಾನದ ಸುತ್ತಮುತ್ತ ಇರುವ ಬಹುಮಹಡಿ ಕಟ್ಟಡಗಳ ಮೇಲಿನಿಂದ ಕಣ್ಗಾವಲು ವ್ಯವಸ್ಥೆ ರೂಪಿಸಲಾಗಿತ್ತು. ಕಬ್ಬನ್ ರಸ್ತೆ, ಎಂ.ಜಿ. ರಸ್ತೆ, ಕಾಮರಾಜ್ ರಸ್ತೆಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.