ಚಿಕ್ಕಜಾಜೂರು: ಕಳೆದ ಶುಕ್ರವಾರ (ಮಾ. 16ರಂದು) ಬೆಳಿಗ್ಗೆ ಗ್ರಾಮದಿಂದ ಕಾಣೆಯಾಗಿದ್ದ ಪುಟ್ಟ ಬಾಲಕ ಸಿ. ಅಭಿಲಾಷ್ ಬುಧವಾರ ಬೆಳಿಗ್ಗೆ ಶವವಾಗಿ ಪತ್ತೆಯಾಗಿದ್ದಾನೆ. ಇದು ವಾಮಾಚಾರದ ಉದ್ದೇಶದಿಂದ ನಡೆದಿರುವ ಕೊಲೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿದೆ.
ಸಮೀಪದ ಕಡೂರು ಗ್ರಾಮದ ಯು.ಎಂ. ಚಂದ್ರಶೇಖರಪ್ಪ ಹಾಗೂ ಶಿಲ್ಪಾ ದಂಪತಿ ಪುತ್ರ, 4 ವರ್ಷ 11 ತಿಂಗಳು ವಯಸ್ಸಿನ ಸಿ.ಅಭಿಲಾಷ್ ಶುಕ್ರವಾರ ಬೆಳಿಗ್ಗೆ ಅಂಗನವಾಡಿಗೆ ಹೋಗಿದ್ದ. ನಂತರ ಕಣ್ಮರೆಯಾಗಿದ್ದುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿತ್ತು. ಯುಗಾದಿ ಅಮಾವಾಸ್ಯೆ ಆದ್ದರಿಂದ ವಾಮಾ
ಚಾರದ ಉದ್ದೇಶದಿಂದ ಮಗುವನ್ನು ಅಪಹರಿಸಿರಬಹುದೆಂದು ಗ್ರಾಮದಲ್ಲಿ ವದಂತಿಗಳು ಹರಡಿದ್ದವು. ಪೋಷಕರು, ಸಂಬಂಧಿಕರು ಹುಡುಕಾಟ ನಡೆಸಿದ್ದರು.
ಆದರೆ, ಗ್ರಾಮದ ಪಶ್ವಿಮ ದಿಕ್ಕಿನಲ್ಲಿರುವ ಕಲ್ಲುಕ್ವಾರಿಯಲ್ಲಿ ಮಗುವಿನ ಮೃತ ದೇಹ ಬುಧವಾರ ಬೆಳಿಗ್ಗೆ ಪತ್ತೆಯಾಗಿದೆ. ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಹಾಗೂ ಸುತ್ತಮುತ್ತಲ ಗ್ರಾಮಗಳ ನಿವಾಸಿಗಳು ಸ್ಥಳಕ್ಕೆ ಧಾವಿಸಿದರು.
ಎಸ್ಪಿ ಬರುವಂತೆ ಪಟ್ಟು: ಸಿಪಿಐ ಗಜೇಂದ್ರಪ್ಪ , ಪಿಎಸ್ಐ ಮಧು ಹಾಗೂ ಸಿಬ್ಬಂದಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು. ಮರಣೋತ್ತರ ಪರೀಕ್ಷೆಗಾಗಿ ಶವ ತೆಗೆದುಕೊಳ್ಳಲು ಅವರು ಮುಂದಾದಾಗ, ಮಗುವಿನ ತಂದೆ ಚಂದ್ರಶೇಖರಪ್ಪ ಬಿಡಲಿಲ್ಲ. ಎಸ್ಪಿ ಸ್ಥಳಕ್ಕೆ ಬರಬೇಕೆಂದು ಪಟ್ಟುಹಿಡಿದರು. ನಂತರ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಎಲ್.ಅರಸಿದ್ಧಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು.
ವಾಮಾಚಾರ ಶಂಕೆ: ‘ಯಾರೋ ದುಷ್ಕರ್ಮಿಗಳು ಅಮಾವಾಸ್ಯೆಯಂದು ವಾಮಾಚಾರಕ್ಕಾಗಿ ಮಗುವನ್ನು ಅಪಹರಿಸಿ, ಬಲಿ ನೀಡಿದ್ದಾರೆ. ಮುಖ, ಕೈ–ಕಾಲುಗಳಿಗೆ ಆ್ಯಸಿಡ್ ಎರಚಿದ್ದಾರೆ’ ಎಂದು ಗ್ರಾಮಸ್ಥರು ಸಂಶಯ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.