ಬೆಂಗಳೂರು: ಸಿಂಗಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟ, ವಸತಿ ಸಚಿವ ಅಂಬರೀಷ್ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದ್ದು, ಖುದ್ದು ಅವರೇ ಮಂಗಳವಾರ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಅವರ ಪ್ರತಿಕ್ರಿಯೆ ಇರುವ ವಿಡಿಯೊ ಪ್ರತಿ ಬಿಡುಗಡೆಯಾಗಿದ್ದು, ಅದರಲ್ಲಿ ಅವರ ಮಾತು ಇಂತಿದೆ.
ನಾನು ನಿಮ್ಮ ಅಂಬರೀಷ್ ಎಂದು ಮಾತು ಆರಂಭಿಸಿದ ಅವರು, ‘ಆರೋಗ್ಯದಲ್ಲಿ ತುಸು ಏರುಪೇರಾಗಿತ್ತು. ಅಭಿಮಾನಿಗಳು ತೋರಿಸಿದ ಪ್ರೀತಿಯಿಂದ ಸಂಪೂರ್ಣವಾಗಿ ಗುಣಮುಖನಾಗಿದ್ದೇನೆ’ ಎಂದು ತಿಳಿಸಿದ್ದಾರೆ.
‘ನಾನೊಬ್ಬ ನಟ, ಸಚಿವ ಅಂತ ಸರ್ಕಾರ ಸಹಾಯ ಮಾಡಿಲ್ಲ. ನನಗೆ ಪ್ರೀತಿಯಿಂದ ನೆರವು ನೀಡಿದೆ. ಇಂತಹ ಸಂದರ್ಭಗಳಲ್ಲಿ ಸ್ಪಂದಿಸುವುದು ಮುಖ್ಯ. ಈ ವಿಚಾರದಲ್ಲಿ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಋಣಿಯಾಗಿದ್ದೇನೆ’ ಎಂದು ಭಾವುಕರಾದರು.
‘ಅಭಿಮಾನಿಗಳ ಪೂಜೆ, ಪುನಸ್ಕಾರ ಫಲಿಸಿದೆ. ಆತಂಕ ಬೇಡ. ವಿಕ್ರಂ ಆಸ್ಪತ್ರೆಯ ವೈದ್ಯರು ಹಾಗೂ ಸಿಂಗಪುರ ಆಸ್ಪತ್ರೆ ವೈದ್ಯರು ಉತ್ತಮ ಚಿಕಿತ್ಸೆ ನೀಡಿದ್ದಾರೆ. ಇನ್ನು ವಾರದಲ್ಲಿ ತಾಯ್ನಾಡಿಗೆ ಮರಳಲಿದ್ದೇನೆ’ ಎಂದು ತಿಳಿಸಿದರು.
ತೀವ್ರ ಉಸಿರಾಟದ ಸೋಂಕಿನಿಂದ ಬಳಲುತ್ತಿದ್ದ ಅವರು ಫೆ. 21 ರಂದು ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಾರ್ಚ್ 1 ರಂದು ವಿಶೇಷ ಏರ್ ಆಂಬುಲೆನ್ಸ್ನಲ್ಲಿ ಅವರನ್ನು ಸಿಂಗಪುರಕ್ಕೆ ಕರೆದುಕೊಂಡು ಹೋಗಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.