ಚಿಕ್ಕಬಳ್ಳಾಪುರ: ನಗರದ ಇಂದಿರಾನಗರದ ಬಳಿಯಿರುವ ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ವಾಷಿಂಗ್ ಮೆಷಿನ್, ಟಿವಿ ಮತ್ತು ಮಿಕ್ಸರ್ಗಳನ್ನು ತಹಶೀಲ್ದಾರ್ ವಶಪಡಿಕೊಂಡ ಘಟನೆ ಭಾನುವಾರ ನಡೆದಿದೆ.
ಚುನಾವಣೆ ಸಿಬ್ಬಂದಿ ಜೊತೆ ದಾಳಿ ನಡೆಸಿದ ತಹಶೀಲ್ದಾರ್ ಒಟ್ಟು 65 ವಾಷಿಂಗ್ ಮೆಷಿನ್, 60 ಟಿ.ವಿ ಮತ್ತು 60 ಮಿಕ್ಸರ್ಗಳನ್ನು ವಶಪಡಿಸಿಕೊಂಡಿದ್ದಾರೆ.
'ಖಚಿತ ಸುಳಿವಿನ ಮೇರೆಗೆ ಗೋದಾಮು ಮೇಲೆ ನಡೆಸಿದೆವು. ಪ್ರಾಥಮಿಕ ತನಿಖೆಯ ಪ್ರಕಾರ, ಈ ಎಲ್ಲ ವಸ್ತುಗಳು ಕಾಂಗ್ರೆಸ್ ಅಭ್ಯರ್ಥಿ ಡಾ.ಕೆ.ಸುಧಾಕರ್ ಅವರ ಸಾಯಿಕೃಷ್ಣ ಚಾರಿಟೇಬಲ್ ಟ್ರಸ್ಟ್ಗೆ ಸೇರಿದ್ದು ಎಂಬುದು ಗೊತ್ತಾಗಿದೆ' ಎಂದು ತಹಶೀಲ್ದಾರ್ ಡಿ.ಬಿ.ನಟೇಶ್ 'ಪ್ರಜಾವಾಣಿ'ಗೆ ತಿಳಿಸಿದರು.
ಟ್ರಸ್ಟ್ ವತಿಯಿಂದ ಕೆಲ ದಿನಗಳ ಹಿಂದೆ ಆಯೋಜಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ ಪಾಲ್ಗೊಂಡವರಿಗೆ ಬಹುಮಾನ ನೀಡಲು ಈ ವಸ್ತುಗಳನ್ನು ತರಿಸಲಾಗಿತ್ತು. ಆದರೆ ಕಾರಣಾಂತರದಿಂದ ವಿಜೇತರಿಗೆ ವಿತರಿಸಲು ಸಾಧ್ಯವಾಗಲಿಲ್ಲ ಎಂದು ಟ್ರಸ್ಟ್ನವರು ಹೇಳಿದ್ದಾರೆ. ಆದರೆ ಇದರ ಬಗ್ಗೆ ತನಿಖೆ ನಡೆಯಬೇಕು' ಎಂದು ತಹಶೀಲ್ದಾರ್ ಹೇಳಿದರು.
'ವಸ್ತುಗಳನ್ನು ಇಲ್ಲಿ ಕೂಡಿಡಲಾಗಿದೆಯಾದರೂ ಅವುಗಳಿಗೆ ಸಂಬಂಧಿಸಿದಂತೆ ದಾಖಲೆ ಪತ್ರಗಳು ಟ್ರಸ್ಟ್ನವರ ಬಳಿ ಪತ್ತೆಯಾಗಿಲ್ಲ. ಟ್ರಸ್ಟ್ ಸದಸ್ಯರು ಮತ್ತು ಗೋದಾಮು ಮಾಲೀಕರನ್ನು ವಿಚಾರಣೆಗೆ ಒಳಪಡಿಸಿದ್ದೇವೆ. ಖಚಿತ ದಾಖಲೆಪತ್ರಗಳನ್ನು ನೀಡುವಂತೆ ಟ್ರಸ್ಟ್ನವರಿಗೆ ಸೂಚಿಸಲಾಗಿದೆ. ಸೋಮವಾರದವರೆಗೆ ಕಾಲಾವಕಾಶ ನೀಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಿ, ಮುಂದಿನ ಕ್ರಮ ಜರುಗಿಸಲಾಗುವುದು. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದ್ದರೆ ಕ್ರಮ ತೆಗೆದುಕೊಳ್ಳಲಾಗುವುದು' ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.