ADVERTISEMENT

ವಿಧಾನಸೌಧ ಮುಂಭಾಗವೇ ಕುಮಾರಸ್ವಾಮಿ ಪ್ರಮಾಣ ವಚನ

ಸಂಪುಟ ರಚನೆ ಚರ್ಚೆಗೆ ಬಿರುಸು

​ಪ್ರಜಾವಾಣಿ ವಾರ್ತೆ
Published 20 ಮೇ 2018, 11:47 IST
Last Updated 20 ಮೇ 2018, 11:47 IST
ಸಂಗ್ರಹ ಚಿತ್ರ.
ಸಂಗ್ರಹ ಚಿತ್ರ.   

ಬೆಂಗಳೂರು: ‘ನಿಯೋಜಿತ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ವಿಧಾನಸೌಧದ ಮುಂಭಾಗದಲ್ಲಿ ಬುಧವಾರ ನಡೆಯಲಿದೆ’ ಎಂದು ಜೆಡಿಎಸ್ ಶಾಸಕ ಬಂಡೆಪ್ಪ ಕಾಶಂಪೂರ ತಿಳಿಸಿದರು.

ಭಾನುವಾರ ಮಧ್ಯಾಹ್ನ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು, ‘ಈ ಮೊದಲು ಹೇಳಿದಂತೆ ಕಂಠೀರವ ಸ್ಟೇಡಿಯಂನಲ್ಲಿ ನಡೆಸಲು ಉದ್ದೇಶಿಸಿದ್ದ ಸಮಾರಂಭವನ್ನು ಈಗ ವಿಧಾನಸೌಧಕ್ಕೆ ಬದಲಾಯಿಸಲಾಗಿದೆ’ ಎಂದರು.

ಸಂಪುಟದ ಬಗ್ಗೆ ಚರ್ಚಿಸಿಲ್ಲ: ‘ಸಂಪುಟ ರಚನೆಯ ಬಗ್ಗೆ ಇನ್ನೂ ಚರ್ಚಿಸಿಲ್ಲ. ನಾನು ನಾಳೆ ದೆಹಲಿಗೆ ತೆರಳುತ್ತಿದ್ದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ಅವರೊಂದಿಗೆ ಸಂಪುಟ ರಚನೆ ಬಗ್ಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದರು.

ADVERTISEMENT

ಸೋತವರಿಗೆ ಸಮಾಧಾನ: ಗೆಲುವಿನ ಹೊಸ್ತಿಲಿಗೆ ಬಂದು ಮುಗ್ಗರಿಸಿದ ಜೆಡಿಎಸ್‌ ಅಭ್ಯರ್ಥಿಗಳ ಜೊತೆ ನಿಯೋಜಿತ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಭಾನುವಾರ ಮಾತುಕತೆ ನಡೆಸಿದರು.

ಸುಮಾರು 20 ನಿಮಿಷಗಳ ಕಾಲ ಅವರೊಂದಿಗೆ ಚರ್ಚಿಸಿದ ಕುಮಾರಸ್ವಾಮಿ, ‘ನಾನು ನಿಮ್ಮ ಜೊತೆಗಿದ್ದೇನೆ. ನಿಮ್ಮ ಕೈಬಿಡುವುದಿಲ್ಲ. ಧೈರ್ಯವಾಗಿರಿ’ ಎಂದು ಭರವಸೆ ತುಂಬಿದರು.

ಭೇಟಿ ಮಾಡಿದ ತಂಡದಲ್ಲಿ ಪಾವಗಡ ಕ್ಷೇತ್ರದಲ್ಲಿ, ತಮ್ಮ ಸಮೀಪದ ಪ್ರತಿಸ್ಪರ್ಧಿ ವೆಂಕಟರಮಣಪ್ಪ ಎದುರು ಕೇವಲ 328 ಮತಗಳ ಅಂತರದಿಂದ ಸೋತಿರುವ ಕೆ.ಎಂ.ತಿಮ್ಮರಾಯಪ್ಪ, ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಪರಾಭವ ಅನುಭವಿಸಿದ ಸಿ.ಬಿ.ಸುರೇಶ್‌ ಬಾಬು, ಮಾಲೂರು ಕ್ಷೇತ್ರದ ಕೆ.ಎಸ್.ಮಂಜುನಾಥಗೌಡ, ಕುಣಿಗಲ್‌ನ ಡಿ.ಕೃಷ್ಣಕುಮಾರ್, ನವಲಗುಂದ ಕ್ಷೇತ್ರದ ಎನ್‌.ಎಚ್.ಕೋನರಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.