ADVERTISEMENT

ವಿವಿಗಳಲ್ಲಿ ಸಮನ್ವಯ ಅಗತ್ಯ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2011, 19:30 IST
Last Updated 21 ಸೆಪ್ಟೆಂಬರ್ 2011, 19:30 IST

ಮೈಸೂರು: `ರಾಜ್ಯದಲ್ಲಿರುವ 27 ವಿಶ್ವವಿದ್ಯಾನಿಲಯಗಳು ಪರಸ್ಪರ ಕೊಡು, ಕೊಳ್ಳುವ ಮೂಲಕ ಸಮನ್ವಯ ಸಾಧಿಸಬೇಕು~ ಎಂದು ರಾಜ್ಯಪಾಲ ಹಂಸರಾಜ ಭಾರದ್ವಾಜ್ ಬುಧವಾರ ಹೇಳಿದರು.

ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ಮೂರು ದಿನಗಳ ಕಾಲ ಆಯೋಜಿಸಿರುವ `ಜಾಗತಿಕ ಪರಿಸರದಲ್ಲಿ ಮುಕ್ತ ಮತ್ತು ದೂರ ಶಿಕ್ಷಣ ಕಲಿಕೆ: ವಿಷಯ ಮತ್ತು ಸವಾಲುಗಳು~ ಕುರಿತಾದ ಅಂತರರಾಷ್ಟ್ರೀಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು `ರಾಜ್ಯದ ಎಲ್ಲ ವಿಶ್ವವಿದ್ಯಾನಿಲಯಗಳು ತಂತ್ರಜ್ಞಾನವನ್ನು ಬಳಸಿಕೊಂಡು ಇ-ಕಲಿಕೆಗೆ ಒತ್ತು ಕೊಡಬೇಕು.
 
ಪ್ರತಿ ವಿಶ್ವವಿದ್ಯಾನಿಲಯ ಸಮ್ಮೇಳನ ಕೊಠಡಿಯನ್ನು ಹೊಂದಿರಬೇಕು. ಇವುಗಳ ಮೂಲಕ ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳುವ ಮೂಲಕ ಹೆಚ್ಚು ಕಲಿಯಲು ಮುಂದಾಗಬೇಕು~ ಎಂದು ತಿಳಿಸಿದರು.

ಸಮ್ಮೇಳನವನ್ನು ನವದೆಹಲಿಯ ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ವಿ.ಎನ್.ಪಿಳೈ ಉದ್ಘಾಟಿಸಿದರು. ಕೆನಡಾದ ಕಾಮನ್ ವೆಲ್ತ್ ಆಫ್ ಲರ್ನಿಂಗ್‌ನ ಅಧ್ಯಕ್ಷ ಜಾನ್ ಡೇನಿಯಲ್ ಸಮ್ಮೇಳನದ ಪ್ರಧಾನ ಭಾಷಣ ಮಾಡಿದರು.

ಪ್ಯಾರಿಸ್‌ನ ಯುನೆಸ್ಕೊದ ಮುಖ್ಯಸ್ಥೆ ಸ್ಟಮೆಂಕಾ ಟ್ರಂಬೆಕ್ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿದರು. ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮ್ಮೇಳನದಲ್ಲಿ ರಾಜ್ಯ, ದೇಶ ಹಾಗೂ ವಿದೇಶಗಳ ಮುಕ್ತ ವಿಶ್ವವಿದ್ಯಾನಿಲಯಗಳ ಕುಲಪತಿಗಳು ಸೇರಿದಂತೆ 500 ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದಾರೆ.

ವಿಶ್ವದ ವಿವಿಧ ಭಾಗದಲ್ಲಿನ ದೂರ ಮತ್ತು ಮುಕ್ತ ಶಿಕ್ಷಣ ರಂಗದಲ್ಲಿನ ಆಡಳಿತಗಾರರು, ಶಿಕ್ಷಣ ತಜ್ಞರು, ಶಿಕ್ಷಣ ರಂಗದ ನೀತಿ ನಿರೂಪಕರು ಮತ್ತು ಸಂಶೋಧಕರು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.