ಕಲಬುರ್ಗಿ: ಇಲ್ಲಿನ ಬಿಜೆಪಿ ಕಚೇರಿಯಲ್ಲಿ ತೆಲಂಗಾಣ ರಾಜ್ಯದ ಬಿಜೆಪಿ ಅಧ್ಯಕ್ಷ ಡಾ. ಕೆ.ಲಕ್ಷ್ಮಣ ಹಾಗೂ ಕಿಸಾನ್ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿ. ಸುಗುಣಾಕರ್ ರಾವ್ ಉಸ್ತುವಾರಿಯಲ್ಲಿ ಶನಿವಾರ ನಡೆದ ಪಕ್ಷ ಸಂಘಟನೆ ಸಭೆಯಲ್ಲಿ ಕಾರ್ಯಕರ್ತರ ಮಧ್ಯೆ ಮಾರಾಮಾರಿ ನಡೆದಿದೆ.
ಶಿವಲಿಂಗಪ್ಪ ಟೆಂಗಳಿ ಉಪಳಾಂವ ಅವರ ತಲೆಗೆ ಕುರ್ಚಿಯಿಂದ ಬಲವಾಗಿ ಹೊಡೆಯಲಾಗಿದ್ದು, ತಲೆಯಿಂದ ರಕ್ತ ಸೋರಿದೆ. ಸದ್ಯ ಅವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
‘ಪಕ್ಷದ ಕಚೇರಿಯಲ್ಲಿ ಬೂತ್ ಮತ್ತು ಶಕ್ತಿ ಕೇಂದ್ರಗಳ ಪ್ರಮುಖರ ಸಭೆ ಕರೆಯಲಾಗಿತ್ತು. ಈ ಸಭೆಗೆ ಶೇ 70ರಷ್ಟು ಪ್ರಮುಖರು ಗೈರಾಗಿದ್ದರು. ಈ ವೇಳೆ ಮಾತನಾಡಿದ ಶಿವಲಿಂಗಪ್ಪ ಟೆಂಗಳಿ, ಪಕ್ಷದಲ್ಲಿ ಅಶಿಸ್ತು ಹೆಚ್ಚಾಗಿದೆ. ಹಳೆಯ ಕಾರ್ಯಕರ್ತರನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಕಾರ್ಯಕರ್ತರಿಗೆ ಯಾವುದೇ ಉಸ್ತುವಾರಿ ಕೊಟ್ಟಿಲ್ಲ. ಆದ್ದರಿಂದ ಕಲಬುರ್ಗಿ ಗ್ರಾಮೀಣ ಮತಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳಿಗೆ ಯಾವುದೇ ಜವಾಬ್ದಾರಿ ವಹಿಸಬಾರದು ಎಂದು ತಮ್ಮ ಅಸಮಾಧಾನ ಹೊರಹಾಕಿದರು’ ಎಂದು ಮೂಲಗಳು ಹೇಳುತ್ತವೆ.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ರವಿ ಬಿರಾದಾರ ಅವರು, ‘ವೀಕ್ಷಕರ ಮುಂದೆ ಹೀಗೆಲ್ಲ ಏಕೆ ಹೇಳುತ್ತಿದ್ದೀರಿ ಎಂದು ಜೋರು ಮಾಡಿದರು. ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ಹೋಯಿತು. ಆಗ ರವಿ ಬಿರಾದಾರ, ಮಂಡಲ ಕಾರ್ಯದರ್ಶಿ ರಾಜು ಕೋಟೆ, ಮುಖಂಡರಾದ ಶರಣು ಸಲಗರ, ಸಂಗಮೇಶ ನಾಗನಹಳ್ಳಿ ಮತ್ತು ಶಶಿಧರ ಮಾಕಾ ಸೇರಿ ಕುರ್ಚಿ ಎತ್ತಿಕೊಂಡು ಶಿವಲಿಂಗಪ್ಪ ಅವರ ತಲೆಗೆ ಹೊಡೆದರು. ಅಲ್ಲದೆ ಅವರ ಮೊಬೈಲ್ ಒಡೆದು ಹಾಕಿದರು. ತಕ್ಷಣ ಮಧ್ಯೆ ಪ್ರವೇಶಿಸಿದ ಸ್ಥಳೀಯ ನಾಯಕರು ಎಲ್ಲರನ್ನೂ ಸಮಾಧಾನ ಪಡಿಸಿದರು’ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.