ADVERTISEMENT

ವೈಭವದ ಬನಶಂಕರಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 19 ಜನವರಿ 2011, 19:30 IST
Last Updated 19 ಜನವರಿ 2011, 19:30 IST

ಬಾದಾಮಿ: ಇಲ್ಲಿನ ಬನಶಂಕರಿ ದೇವಿಯ ರಥೋತ್ಸವ ಬುಧವಾರ ಸಂಜೆ ಸಡಗರ, ಸಂಭ್ರಮದಿಂದ ನಡೆಯಿತು.ರಥೋತ್ಸವಕ್ಕೆ ಮುನ್ನ ಬನಶಂಕರಿ ದೇವಿಯ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಸಿಂಗರಿಸಿದ ಪಲ್ಲಕ್ಕಿಯಲ್ಲಿ ಮೂರ್ತಿಯನ್ನು ಮೆರವಣಿಗೆ ಮೂಲಕ ಕೊಂಡೊಯ್ಯಲಾಯಿತು.

ವಿವಿಧ ವರ್ಣಗಳ ಧ್ವಜಗಳಿಂದ ಹಾಗೂ ಬಾಳೆಯ ಕಂಬ, ವಿವಿಧ ಪುಷ್ಪ ಮಾಲೆಗಳಿಂದ ರಥವನ್ನು ಸಿಂಗರಿಸಲಾಗಿತ್ತು. ದೇವಿಯ ಸಹಸ್ರಾರು ಭಕ್ತರು ಶ್ರದ್ಧೆ ಹಾಗೂ ಭಕ್ತಿಯಿಂದ ಘೋಷಣೆಗಳನ್ನು ಕೂಗುತ್ತ ದೇವಿಯ ಪಾದಗಟ್ಟೆಯವರೆಗೆ ತೇರನ್ನು ಎಳೆದರು.

ರಥ ಸಾಗುತ್ತಿದ್ದಾಗ ಭಕ್ತರು ರಥಕ್ಕೆ ಪುಷ್ಪ, ಉತ್ತತ್ತಿ, ಬಾಳೆಹಣ್ಣು ಹಾಗೂ ಲಿಂಬೆಹಣ್ಣುಗಳನ್ನು ಎಸೆದು ದೇವಿಯ ಕೃಪೆಗೆ ಪಾತ್ರರಾದರು. ರಥೋತ್ಸವ ನಂತರ ಭಕ್ತರು ದೇವಿಯ ದರ್ಶನ ಪಡೆದರು.

ಹಂಪಿ ಹೇಮಕೂಟ ದಯಾನಂದ ಪುರಿ ಸ್ವಾಮೀಜಿ, ಮಾಜಿ ಶಾಸಕ ಬಿ.ಬಿ. ಚಿಮ್ಮನಕಟ್ಟಿ, ದೇವಾಲಯ ಟ್ರಸ್ಟ್ ಕಮೀಟಿ ಅಧ್ಯಕ್ಷ ಎಸ್.ಡಿ. ಪೂಜಾರ, ಬಾಗಲಕೋಟೆ ಉಪವಿಭಾಗ ಅಧಿಕಾರಿ ಗೋವಿಂದರೆಡ್ಡಿ, ತಹಸೀಲ್ದಾರ ಮಹೇಶ ಕರ್ಜಗಿ ಸೇರಿದಂತೆ ಇತರ ಗಣ್ಯರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.