ADVERTISEMENT

ಶಬರಿಮಲೆ:ಪರಿಹಾರ ಹಣ ಹೆಚ್ಚಿಸಲು ಕೋರಿ ಸಿಎಂಗೆ ಪತ್ರ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2011, 18:50 IST
Last Updated 3 ಫೆಬ್ರುವರಿ 2011, 18:50 IST

ಬೆಂಗಳೂರು: ಕಳೆದ ಜನವರಿ ತಿಂಗಳು ಶಬರಿಮಲೆಯಲ್ಲಿ ನಡೆದ ಕಾಲ್ತುಳಿತ ಘಟನೆಯಿಂದಾಗಿ ಮೃತಪಟ್ಟ ಕುಟುಂಬದವರಿಗೆ ರಾಜ್ಯ ಸರ್ಕಾರ ಘೋಷಿಸಿರುವ ಒಂದು ಲಕ್ಷ ರೂಪಾಯಿ ಪರಿಹಾರವನ್ನು 2 ಲಕ್ಷ ರೂಪಾಯಿಗೆ ಏರಿಸುವಂತೆ ಸಚಿವೆ ಶೋಭಾ ಕರಂದ್ಲಾಜೆ ಅವರು ಮುಖ್ಯಮಂತ್ರಿಯವರನ್ನು ಕೋರಿದ್ದಾರೆ.

ಈ ಕುರಿತು ಬಿ.ಎಸ್.ಯಡಿಯೂರಪ್ಪನವರಿಗೆ ಮನವಿ ಸಲ್ಲಿಸಿರುವ ಅವರು, ಘಟನೆಯಲ್ಲಿ ಮೃತಪಟ್ಟ 30 ಜನ ಯುವಕರು ಕುಟುಂಬದ ಆಧಾರ ಸ್ಥಂಭವಾಗಿದ್ದರು. ಅವರಿಗೆ ಹೆಚ್ಚಿನ ಪರಿಹಾರ ನೀಡುವ ಅಗತ್ಯ ಇದೆ ಎಂದಿದ್ದಾರೆ.

ಶಬರಿಮಲೆಯನ್ನು ರಾಷ್ಟ್ರೀಯ ಯಾತ್ರಾ ಸ್ಥಳ ಎಂದು ಘೋಷಿಸಬೇಕು, ಕುಂಭ ಮೇಳದಲ್ಲಿ ನೀಡುವ ಭದ್ರತೆಯನ್ನು ಇಲ್ಲಿಯೂ ನೀಡಬೇಕು, ಸರ್ಕಾರ ತಯಾರು ಮಾಡಿರುವ ಮಾಸ್ಟರ್ ಪ್ಲ್ಯಾನ್ ಅನ್ನು ತಕ್ಷಣ ಜಾರಿಯಲ್ಲಿ ತರಬೇಕು. ಕೇರಳ ಸರ್ಕಾರ ರಸ್ತೆ ವಿಸ್ತರಣೆಗೆ ಅದ್ಯತೆ ನೀಡಲು ಸೂಚಿಸಬೇಕು, ಭಕ್ತರು ಸಾಗುವ ದಾರಿಯಲ್ಲಿ ಶಾಶ್ವತವಾದ ಕಬ್ಬಿಣದ ತಂತಿ ಬೇಲಿ ನಿರ್ಮಾಣ ಮಾಡಬೇಕು, ಭಕ್ತಾದಿಗಳಿಗೆ ಶೌಚಾಲಯ, ಕುಡಿಯುವ ನೀರು, ಆಹಾರ ಇತ್ಯಾದಿ ಮೂಲ ಸೌಕರ್ಯ ಒದಗಿಸಬೇಕು ಎಂದು ಕೇರಳ ಸರ್ಕಾರ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಬೇಕು ಎಂದು ಶೋಭಾ ಮನವಿಯಲ್ಲಿ ತಿಳಿಸಿದ್ದಾರೆ.

ಇದರ ಜೊತೆ ನಮ್ಮ ರಾಜ್ಯದಲ್ಲಿ ಶಬರಿಮಲೆ ಸಹಾಯವಾಣಿ ಆರಂಭಿಸಬೇಕು, ಬರುವ ಡಿ.15ರಿಂದ ಜ.15ರವರೆಗೆ ಒಂದು ವೈದ್ಯರ ತಂಡ, ಔಷಧಿ ವ್ಯವಸ್ಥೆಗಳನ್ನು ನಮ್ಮ ಸರ್ಕಾರವೇ ಮಾಡಬೇಕು. ರಾಜ್ಯದ ವಿಪತ್ತು ನಿರ್ವಹಣಾ ತಂಡವನ್ನು ಶಬರಿಮಲೆಯಲ್ಲಿ ಸುಸಜ್ಜಿತವಾಗಿರುವಂತೆ ಮಾಡಬೇಕು ಎಂದೂ ಅವರು ಮನವಿ ಮಾಡಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.