ಮಾಲೂರು: ವಿದ್ಯುತ್ ಶಾರ್ಟ್ ಸರ್ಕಿಟ್ ಉಂಟಾಗಿ ತಾಲ್ಲೂಕಿನ ಕೂರಂಡಹಳ್ಳಿ ಕೈಗಾರಿಕಾ ಪ್ರಾಂಗಣದಲ್ಲಿರುವ ಬನಶಂಕರಿ ಆಯಿಲ್ ಮತ್ತು ಕೆಮಿಕಲ್ಸ್ ಕಾರ್ಖಾನೆ ಸಂಪೂರ್ಣ ಸುಟ್ಟು ಭಸ್ಮವಾಗಿದೆ.
ಬನಶಂಕರಿ ಆಯಿಲ್ ಮತ್ತು ಕೆಮಿಕಲ್ಸ್ ಕಾರ್ಖಾನೆಯಲ್ಲಿ ಗುರುವಾರ ಬೆಳಿಗ್ಗೆ ಸುಮಾರು 8ಗಂಟೆಯಲ್ಲಿ ಸಣ್ಣದಾಗಿ ಬೆಂಕಿ ಹತ್ತಿಕೊಂಡಿದೆ. ಗುರುವಾರ ಸರ್ಕಾರಿ ರಜಾ ದಿನವಾಗಿದ್ದರಿಂದ ನೌಕರರು ಕಾರ್ಖಾನೆಗೆ ಹಾಜರಾಗಿರಲಿಲ್ಲ. ಭದ್ರತಾ ಸಿಬ್ಬಂದಿಗಳು ಬೆಂಕಿ ನಂದಿಸಲು ಪ್ರಯತ್ನಿಸಿದರು. ಆದರೆ ಬ್ಯಾರಲ್ಗಳಲ್ಲಿದ್ದ ಆಯಿಲ್ಗೆ ಬೆಂಕಿ ತಗುಲಿದ್ದರಿಂದ ಬೆಂಕಿ ಆಗಾಧವಾಗಿ ಹತ್ತಿಕೊಂಡು ಇಡೀ ಕಾರ್ಖಾನೆ ಬೆಂಕಿಗೆ ಆಹುತಿಯಾಯಿತು. 11 ಗಂಟೆಗೆ ಅಗ್ನಿ ಶಾಮಕ ದಳದ ಸಿಬ್ಬಂದಿ ಸತತವಾಗಿ 6 ಗಂಟೆಗಳ ಕಾಲ ಶ್ರಮ ವಹಿಸಿ ಬೆಂಕಿಯನ್ನು ನಂದಿಸಿದರು.
ಕಾರ್ಖಾನೆಯ ಆವರಣದಲ್ಲಿದ್ದ 4 ಕ್ಯಾಂಟರ್ ವಾಹನಗಳು, ಬಾಯ್ಲರ್ಗಳು ಮತ್ತು ಯಂತ್ರಗಳು ಸಂಪೂರ್ಣ ಸುಟ್ಟು ಭಸ್ಮವಾಗಿದ್ದು. ಸುಮಾರು ₹ 6ರಿಂದ 8 ಕೋಟಿ ನಷ್ಟ ಉಂಟಾಗಿರುವುದಾಗಿ ಕಾರ್ಖಾನೆಯ ಆಡಳಿತ ಮಂಡಳಿಯ ಸದಸ್ಯ ನಾಸೀರ್ ತಿಳಿಸಿದರು.
ಬೆಂಕಿ ಭೀತಿ: ಕೂರಂಡಹಳ್ಳಿ ಕೈಗಾರಿಕಾ ಪ್ರಾಂಗಣದಲ್ಲಿರುವ ಬನಶಂಕರಿ ಆಯಿಲ್ ಮತ್ತು ಕೆಮಿಕಲ್ಸ್ ಕಾರ್ಖಾನೆಯಲ್ಲಿ ಬೆಂಕಿ ಹತ್ತಿಕೊಂಡು ಆಯಿಲ್ ಬ್ಯಾರಲ್ಗಳು ಸಿಡಿಯುತ್ತಿದ್ದಂತೆ ಅದರಿಂದ ಬರುತ್ತಿದ್ದ ಶಬ್ದಕ್ಕೆ ಅಕ್ಕ ಪಕ್ಕದ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಗಾಬರಿಯಿಂದ ಕೆಲಸ ಬಿಟ್ಟು ಹೊರ ಓಡಿ ಬಂದರು.
ಕಾರ್ಖಾನೆಯಿಂದ ಹೊರ ಬರುತ್ತಿದ್ದ ಹೊಗೆಯಿಂದ ಕೈಗಾರಿಕಾ ಪ್ರಾಂಗಣವು ಸಂಪೂರ್ಣ ಕತ್ತಲು ಆವರಿಸಿತು. ಅಗ್ನಿ ಶಾಮಕ ದಳ ಸಿಬ್ಬಂದಿ ಶ್ರಮವಹಿಸಿ ಅಕ್ಕ ಪಕ್ಕದ ಕಾರ್ಖಾನೆಗಳಿಗೆ ಬೆಂಕಿ ಹರಡದಂತೆ ತಡೆಯುವಲ್ಲಿ ಯಶಸ್ವಿಯಾದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.