ADVERTISEMENT

ಶಾಲ್ಮಲಾ ನದಿ ಕಣಿವೆ ಸಂರಕ್ಷಿತ ಪ್ರದೇಶ: ಸರ್ಕಾರ ಘೋಷಣೆ

​ಪ್ರಜಾವಾಣಿ ವಾರ್ತೆ
Published 5 ಜೂನ್ 2012, 19:30 IST
Last Updated 5 ಜೂನ್ 2012, 19:30 IST

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಶಾಲ್ಮಲಾ ನದಿ ಕಣಿವೆಯನ್ನು ಸಂರಕ್ಷಿತ ಪ್ರದೇಶ ಎಂದು ಸರ್ಕಾರ ಘೋಷಿಸಿದೆ. ದೇಶದಲ್ಲೇ ಪ್ರಥಮ ಬಾರಿಗೆ ಸಂರಕ್ಷಿತ ಪ್ರದೇಶ ಎಂಬ ಮಾನ್ಯತೆ ದೊರೆತ ನದಿ ಕಣಿವೆ ಇದಾಗಿದೆ.

ಶಾಲ್ಮಲಾ ನದಿ ಕಣಿವೆಯ ಸಹಸ್ರಲಿಂಗದಿಂದ ಗಣೇಶಫಾಲ್ ತನಕ 15.76 ಕಿ.ಮೀ ವ್ಯಾಪ್ತಿಯ 489 ಹೆಕ್ಟೇರ್ ಪ್ರದೇಶ ಸಂರಕ್ಷಿತ ಪ್ರದೇಶವಾಗಿದೆ ಎಂದು ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಕ್ಷ ಅನಂತ ಅಶೀಸರ ತಿಳಿಸಿದರು.
ತಾಲ್ಲೂಕಿನ ಸ್ವರ್ಣವಲ್ಲೆ ಮಠದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಠಾಧೀಶ ಗಂಗಾಧರೇಂದ್ರ ಸರಸ್ವತಿ  ಸ್ವಾಮೀಜಿ ಅವರಿಗೆ ಶಾಲ್ಮಲಾ ನದಿ ಕಣಿವೆ ಸಂರಕ್ಷಿತ ಪ್ರದೇಶ ಘೋಷಣೆಯ ಸರ್ಕಾರದ ಆದೇಶದ ಪ್ರತಿಯನ್ನು ಹಸ್ತಾಂತರಿಸಿ ಅವರು ಮಾತನಾಡಿದರು.

ಗಂಗಾಧರೇಂದ್ರ ಸರಸ್ವತಿ  ಸ್ವಾಮೀಜಿ ಮಾತನಾಡಿ, ಹೀಗೆಯೇ ಎಲ್ಲ ನದಿಗುಂಟದ ಪ್ರದೇಶಗಳನ್ನು ಸಂರಕ್ಷಿತ ವಲಯದ ವ್ಯಾಪ್ತಿಗೆ ಸೇರಿಸುವ ಪ್ರಯತ್ನ ಆಗಬೇಕು ಎಂದು ಕರೆ ನೀಡಿದರು.ಗೌರವ ವನ್ಯಜೀವಿ ಪರಿಪಾಲಕ ಬಾಲಚಂದ್ರ ಸಾಯಿಮನೆ ಮಾತನಾಡಿ, ಬ್ರೆಜಿಲ್ ದೇಶದಲ್ಲಿ ನದಿ ಕಣಿವೆಯೊಂದು ಸಂರಕ್ಷಿತ ಪ್ರದೇಶವಾಗಿ ಘೋಷಣೆಯಾಗಿದೆ. ಭಾರತದಲ್ಲಿ ಶಾಲ್ಮಲಾ ನದಿ ಕಣಿವೆಯನ್ನು ಮೊದಲ ಸಂರಕ್ಷಿತ ನದಿ ಕಣಿವೆ ಪ್ರದೇಶವಾಗಿದೆ.

ಶಾಲ್ಮಲಾ ನದಿ ಕಣಿವೆಯ ಈ ಪ್ರದೇಶ ಮೆಗಾ ಅಭಿವೃದ್ಧಿ ಯೋಜನೆಗಳಿಂದ ಮುಕ್ತವಾಗಿದ್ದು, ಸ್ಥಳೀಯರ ಸಹಭಾಗಿತ್ವದಲ್ಲಿ ಸಂರಕ್ಷಣಾ ಸಮಿತಿ ರಚನೆಯಾಗಲಿದೆ ಎಂದರು.ಪಶ್ಚಿಮಘಟ್ಟ ಕಾರ್ಯಪಡೆ ಸದಸ್ಯರಾದ ಡಾ.ಆರ್.ವಾಸುದೇವ, ಡಾ. ಕೇಶವ ಕೊರ್ಸೆ  ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.