ಬೆಂಗಳೂರು: ಮೊರಾರ್ಜಿ ದೇಸಾಯಿ/ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ ಕೃಪಾಂಕ ನೀಡಿ, ಕಾಯಂ ನೇಮಕಾತಿಗೆ ಪರಿಗಣಿಸುವಂತೆ ಹೈಕೋರ್ಟ್ ನೀಡಿರುವ ಆದೇಶ ಜಾರಿಯಾಗದ ಕಾರಣ ಎರಡು ಸಾವಿರ ಶಿಕ್ಷಕರು ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
ಎಂಟು ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ವಸತಿ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ ವಾರ್ಷಿಕ ಶೇಕಡ 5ರಷ್ಟು ಕೃಪಾಂಕ ನೀಡಿ ಅವರನ್ನು ಆಯ್ಕೆಗೆ ಪರಿಗಣಿಸುವಂತೆ ಹೈಕೋರ್ಟ್ನ ಏಕ ಸದಸ್ಯಪೀಠ 2012ರ ಜುಲೈ 13ರಂದು ಆದೇಶಿಸಿತ್ತು. ಏಕಸದಸ್ಯ ಪೀಠದ ಆದೇಶ ಎತ್ತಿ ಹಿಡಿದು ಹೈಕೋರ್ಟ್ ವಿಭಾಗೀಯ ಪೀಠ ಫೆಬ್ರುವರಿ 28ರಂದು ತೀರ್ಪು ನೀಡಿತ್ತು.
ಆದರೆ, ವಸತಿ ಶಿಕ್ಷಣ ಸಂಸ್ಥೆಗಳ ಸಂಘವು ಇದುವರೆಗೆ ಹೈಕೋರ್ಟ್ ಆದೇಶ ಜಾರಿಗೆ ಕ್ರಮಕೈಗೊಂಡಿಲ್ಲ. ಇದರಿಂದಾಗಿ ಉದ್ಯೋಗ ಕಳೆದು ಆತಂಕದಲ್ಲಿದ್ದೇವೆ ಎಂದು ನೊಂದ ಗುತ್ತಿಗೆ ಶಿಕ್ಷಕರು `ಪ್ರಜಾವಾಣಿ'ಯೊಂದಿಗೆ ಅಳಲು ತೋಡಿಕೊಂಡರು.
ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿ ಬರುವ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘವು ವಸತಿ ಶಾಲೆಗಳಿಗೆ ಅಗತ್ಯವಿರುವ 3,600 ಪ್ರಾಂಶುಪಾಲರು/ಶಿಕ್ಷಕರನ್ನು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಒಂದು ವರ್ಷದ ಹಿಂದೆ ನೇಮಕ ಮಾಡಿಕೊಂಡಿತ್ತು. ಆ ಸಂದರ್ಭದಲ್ಲಿ ತಮಗೆ ಕೃಪಾಂಕ ನೀಡಿ ಕಾಯಂ ನೇಮಕಾತಿಗೆ ಪರಿಗಣಿಸುವಂತೆ ಗುತ್ತಿಗೆ ಶಿಕ್ಷಕರು ಮಾಡಿದ ಮನವಿಯನ್ನು ಸಂಘವು ತಿರಸ್ಕರಿಸಿತ್ತು.
ಇದರಿಂದ ಬೇಸತ್ತ ಶಿಕ್ಷಕರು ಹೈಕೋರ್ಟ್ ಮೊರೆ ಹೋಗಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ ನೇಮಕಾತಿ ಪ್ರಕ್ರಿಯೆಗೆ ತಡೆ ನೀಡಲಿಲ್ಲ. ಆದರೆ, ಮಧ್ಯಂತರ ಆದೇಶದಲ್ಲಿ ಆಯ್ಕೆಪಟ್ಟಿಯು ನ್ಯಾಯಾಲಯದ ಅಂತಿಮ ಆದೇಶಕ್ಕೆ ಬದ್ಧವಾಗಿರಬೇಕು ಎಂದು ತಿಳಿಸಿತ್ತು.
ಹೈಕೋರ್ಟ್ನ ಅಂತಿಮ ಆದೇಶ ಬರುವ ಮೊದಲೇ ತರಾತುರಿಯಲ್ಲಿ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿದ ಸಂಘ, ಆಯ್ಕೆಯಾದ ಶಿಕ್ಷಕರಿಗೆ/ಪ್ರಾಂಶುಪಾಲರಿಗೆ 2012ರ ಜೂನ್ ಮೊದಲ ವಾರದಲ್ಲಿ ನೇಮಕಾತಿ ಆದೇಶ ನೀಡಿತು. ಇದಾದ ಒಂದು ತಿಂಗಳಲ್ಲೇ ಅಂತಿಮ ತೀರ್ಪು ನೀಡಿದ ನ್ಯಾಯಾಲಯ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ/ಪ್ರಾಂಶುಪಾಲರಿಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗಳಿಸಿರುವ ಅಂಕಗಳೊಂದಿಗೆ ವಾರ್ಷಿಕ ಶೇಕಡ 5ರಷ್ಟು ಕೃಪಾಂಕ ಸೇರಿಸಬೇಕು ಎಂದು ಆದೇಶಿಸಿತು.
ಇದನ್ನು ಪಾಲಿಸಿದರೆ ಈಗಾಗಲೇ ನೇಮಕಗೊಂಡಿರುವ ಶಿಕ್ಷಕರಿಗೆ ತೊಂದರೆಯಾಗಲಿದೆ ಎಂಬುದನ್ನು ಮನಗಂಡ ಸಂಘ, ಹೈಕೋರ್ಟ್ನ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತು. ವಿಭಾಗೀಯ ಪೀಠವು ಏಕಸದಸ್ಯ ಪೀಠದ ಆದೇಶವನ್ನೇ ಎತ್ತಿಹಿಡಿಯಿತು.
ಸರ್ಕಾರದ ನಿಯಮಾನುಸಾರವೇ ಜಿಲ್ಲಾ ಪಂಚಾಯತ್ ಮೂಲಕ ಗುತ್ತಿಗೆ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಇವರ ನೇಮಕಾತಿ ಅರೆಕಾಲಿಕವಾಗಿಲ್ಲದ ಕಾರಣ ಉಮಾದೇವಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನಿಡಿರುವ ತೀರ್ಪು ಈ ಪ್ರಕರಣಕ್ಕೆ ಅನ್ವಯಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.
ಕೃಪಾಂಕ ನೀಡುವುದು ಸಂವಿಧಾನದ ಕಲಂ 14, 15ರ ಉಲ್ಲಂಘನೆ ಆಗುವುದಿಲ್ಲ. ಸರ್ಕಾರದ ಮೀಸಲಾತಿ ನೀತಿಯ ಮೇಲೆ ಪರಿಣಾಮ ಬೀರುವುದಿಲ್ಲ. ಕೃಪಾಂಕವು ಮೀಸಲಾತಿ ಆಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಹೀಗಾಗಿ ಗುತ್ತಿಗೆ ಶಿಕ್ಷಕರಿಗೆ ವಾರ್ಷಿಕ ಶೇಕಡ 5ರಷ್ಟು ಕೃಪಾಂಕ ನೀಡಿ, ವಯೋಮಿತಿ ಸಡಿಲಿಸಬೇಕು ಎಂದು ಹೈಕೋರ್ಟ್ ತಿಳಿಸಿದೆ.
ಈಗಾಗಲೇ ನೇಮಕಗೊಂಡವರಿಗೆ ತೊಂದರೆ ಆಗದಂತೆ ಗುತ್ತಿಗೆ ಶಿಕ್ಷಕರು, ಪ್ರಾಂಶುಪಾಲರಿಗೆ ಕೃಪಾಂಕ ನೀಡಿ ನೇಮಕಾತಿ ಮಾಡಿಕೊಳ್ಳಬೇಕು. ಒಂದು ವೇಳೆ ಈಗಾಗಲೇ ನೇಮಕಗೊಂಡವರಿಗೆ ತೊಂದರೆ ಆಗುತ್ತದೆ ಎನ್ನುವುದಾದರೆ, ನೇಮಕಾತಿ ಪಟ್ಟಿಯ ಕೊನೆಯಲ್ಲಿ ಇರುವವರನ್ನು ಕೈಬಿಟ್ಟು, ಅವರ ಸ್ಥಾನಕ್ಕೆ ಕೃಪಾಂಕದ ಮೂಲಕ ಆಯ್ಕೆಯಾದವರನ್ನು ನೇಮಕ ಮಾಡುವಂತೆ ನ್ಯಾಯಾಲಯ ಸೂಚಿಸಿದೆ.
ಹೈಕೋರ್ಟ್ ಆದೇಶ ಪಾಲನೆ ಮಾಡಬೇಕಾದರೆ ಈಗಾಗಲೇ ನೇಮಕಗೊಂಡಿರುವ 3,600 ಮಂದಿಯ ಆಯ್ಕೆಪಟ್ಟಿ ಪರಿಷ್ಕರಿಸಬೇಕಾಗುತ್ತದೆ. ಪರಿಷ್ಕರಣೆ ಸಂದರ್ಭದಲ್ಲಿ ಎಷ್ಟು ಮಂದಿ ಹೊಸದಾಗಿ ಸೇರ್ಪಡೆ ಆಗುತ್ತಾರೋ, ಅಷ್ಟೇ ಸಂಖ್ಯೆಯಲ್ಲಿ ಈಗಾಗಲೇ ನೇಮಕಗೊಂಡವರು ಹೊರ ಹೋಗಬೇಕಾಗುತ್ತದೆ. ಹೀಗಾಗಿ ಸಂಘವು ಯಾವುದೇ ನಿರ್ಧಾರ ತೆಗೆದುಕೊಳ್ಳದೆ ಮೀನಮೇಷ ಎಣಿಸುತ್ತಿದೆ ಎಂಬುದು ಗುತ್ತಿಗೆ ಶಿಕ್ಷಕರ ಆರೋಪ.
ಅಭಿಪ್ರಾಯ ಸಂಗ್ರಹ
ಹೈಕೋರ್ಟ್ ಆದೇಶವನ್ನು ವಿಭಿನ್ನವಾಗಿ ವ್ಯಾಖ್ಯಾನಿಸಲಾಗುತ್ತಿದೆ. ಕೃಪಾಂಕ ನೀಡಿ ಎಂದು ನ್ಯಾಯಾಲಯ ಹೇಳಿರುವುದು ನಿಜ. ಆದರೆ, ಈಗಾಗಲೇ ಆಯ್ಕೆಯಾದವರಿಗೆ ತೊಂದರೆ ಆಗಬಾರದು ಎಂದು ಹೇಳಿದೆ. ಹೀಗಾಗಿ ಕಾನೂನು ತಜ್ಞರ ಅಭಿಪ್ರಾಯ ಪಡೆಯಲಾಗುತ್ತಿದೆ. ತಜ್ಞರ ಸಲಹೆ ಆಧರಿಸಿ ಆದಷ್ಟು ಬೇಗ ತೀರ್ಮಾನ ತೆಗೆದುಕೊಳ್ಳಲಾಗುವುದು.
- ಬಿ.ಎಸ್.ಪುರುಷೋತ್ತಮ್, ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ
ಬೊಕ್ಕಸಕ್ಕೆ ರೂ18 ಕೋಟಿ ನಷ್ಟ !
2004ರಲ್ಲಿ ನೇಮಕಗೊಂಡಿರುವ ಬಹುತೇಕ ಗುತ್ತಿಗೆ ಶಿಕ್ಷಕರು ಹೈಕೋರ್ಟ್ ಆದೇಶದಂತೆ ಈಗಲೂ ಸೇವೆಯಲ್ಲಿ ಮುಂದುವರಿದಿದ್ದಾರೆ. ಈ ಮಧ್ಯೆ ವರ್ಷದ ಹಿಂದೆ ನೇಮಕವಾಗಿರುವ ಕಾಯಂ ಶಿಕ್ಷಕರನ್ನೂ ಈ ಹುದ್ದೆಗಳಿಗೇ ನೇಮಕ ಮಾಡಲಾಗಿದೆ.
ಸುಮಾರು 700 ಹುದ್ದೆಗಳಲ್ಲಿ ಇಬ್ಬರು ಶಿಕ್ಷಕರು (ಒಬ್ಬ ಕಾಯಂ ಹಾಗೂ ಒಬ್ಬ ಗುತ್ತಿಗೆ) ಕಾರ್ಯನಿರ್ವಹಿಸುತ್ತಿದ್ದಾರೆ. ಇಬ್ಬರಿಗೂ ಸಂಬಳ ನೀಡುತ್ತಿರುವುದರಿಂದ ವಾರ್ಷಿಕ ಸರ್ಕಾರದ ಬೊಕ್ಕಸಕ್ಕೆ ರೂ18 ಕೋಟಿ ನಷ್ಟವಾಗಿದೆ ಎಂಬುದು ಗುತ್ತಿಗೆ ಶಿಕ್ಷಕರ ಆರೋಪ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.