ಸುರಪುರ (ಯಾದಗಿರಿ ಜಿಲ್ಲೆ): ಬಾದಾಮಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ವಿರುದ್ಧ ಪ್ರಚಾರ ಮಾಡುವುದಿಲ್ಲ ಎಂದು ನಟ ಸುದೀಪ್ ಶನಿವಾರ ಸ್ಪಷ್ಟಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಶ್ರೀರಾಮುಲು ನನ್ನ ಸಹೋದರ. ಅವರ ವಿರುದ್ಧ ಪ್ರಚಾರಕ್ಕೆ ಹೋಗುವುದಿಲ್ಲ’ ಎಂದು ತಿಳಿಸಿದರು.
‘ನಾನು ಬಾದಾಮಿ ಕ್ಷೇತ್ರಕ್ಕೆ ಹೋಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರ ಪ್ರಚಾರ ಮಾಡುತ್ತೇನೆ ಎಂದು ಎಲ್ಲೂ ಹೇಳಿಲ್ಲ. ಹೀಗಾಗಿ, ಹೋಗುವ ಪ್ರಶ್ನೇಯೇ ಇಲ್ಲ’ ಎಂದು ಹೇಳಿದರು.
‘ಸುರಪುರ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿರುವ ರಾಜೂಗೌಡ ಆತ್ಮೀಯ ಗೆಳೆಯ. ಹೀಗಾಗಿ ಅವರಿಗೆ ಬೆಂಬಲ ಸೂಚಿಸಲು ಬಂದಿದ್ದೇನೆ. ಈ ಹಿಂದೆ ಅವರು ಎರಡು ಬಾರಿ ಗೆದ್ದು ಕ್ಷೇತ್ರದಲ್ಲಿ ಜನಪರ ಕೆಲಸ ಮಾಡಿದ್ದಾರೆ' ಎಂದರು.
‘ನನಗೆ ರಾಜಕೀಯ ಇಷ್ಟವಿಲ್ಲ. ನಾನೊಬ್ಬ ಕಲಾವಿದ. ಆತ್ಮೀಯರ ಪರ ಮಾತ್ರ ಪ್ರಚಾರಕ್ಕೆ ಹೋಗುತ್ತಿದ್ದೇನೆ. ಆ ಪಕ್ಷ, ಈ ಪಕ್ಷ ಎನ್ನುವುದಿಲ್ಲ’ ಎಂದು ತಮ್ಮ ನಿಲುವನ್ನು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.