ADVERTISEMENT

ಶ್ರುತಿಯ ಎರಡನೇ ಮದುವೆ ಅನೂರ್ಜಿತ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2013, 19:59 IST
Last Updated 20 ಸೆಪ್ಟೆಂಬರ್ 2013, 19:59 IST

ಬೆಂಗಳೂರು: ಚಿತ್ರನಟಿ ಶ್ರುತಿ ಮತ್ತು ಪತ್ರಕರ್ತ ಚಂದ್ರಚೂಡ ಅವರ ವಿವಾಹ ಕಾನೂನು ಬಾಹಿರ ಎಂದು ಕೌಟುಂಬಿಕ ನ್ಯಾಯಾಲಯ ಶುಕ್ರವಾರ ಆದೇಶ ನೀಡಿದೆ.

ವಿವಾಹ ಅಸಿಂಧುಗೊಳಿಸಲು ತಮ್ಮ ಅಭ್ಯಂತರ ಇಲ್ಲ ಎಂದು ಶ್ರುತಿ ಮತ್ತು ಚಂದ್ರಚೂಡ ಸಲ್ಲಿಸಿದ ಹೇಳಿಕೆ ಆಧರಿಸಿ, ಈ ಆದೇಶ ಹೊರಬಂದಿದೆ.
ಇದು ಶ್ರುತಿ ಅವರ ಎರಡನೆಯ ಮದುವೆಯಾಗಿತ್ತು. ಅವರು ಚಂದ್ರಚೂಡ ಅವರನ್ನು ಉಡುಪಿ ಜಿಲ್ಲೆಯ ಕೊಲ್ಲೂರಿನಲ್ಲಿ ಜೂನ್‌ನಲ್ಲಿ ಮದುವೆಯಾಗಿದ್ದರು.

‘ಚಂದ್ರಚೂಡ ಅವರು ಇದಕ್ಕೂ ಮೊದಲು ನನ್ನ ಜೊತೆ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ. ಅವರು ನನ್ನಿಂದ ವಿಚ್ಛೇದನ ಪಡೆದಿಲ್ಲ. ಮೊದಲ ಪತ್ನಿಯಿಂದ ವಿಚ್ಛೇದನ ಪಡೆಯದೆ, ಮತ್ತೊಂದು ಮದುವೆಯಾಗುವುದು ಹಿಂದೂ ವಿವಾಹ ಕಾಯ್ದೆಯ ಉಲ್ಲಂಘನೆ’ ಎಂದು ದೂರಿ ಚಂದ್ರಚೂಡ ಅವರ ಮೊದಲ ಪತ್ನಿ ಮಂಜುಳಾ ನ್ಯಾಯಾಲಯದ ಮೊರೆ ಹೋಗಿದ್ದರು. ಇದರ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಆದೇಶ ಕಾಯ್ದಿರಿಸಿತ್ತು.

ಮಂಜುಳಾ ಅವರು ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ, ಶ್ರುತಿ ಮತ್ತು ಚಂದ್ರಚೂಡ ಅವರಿಗೆ ನ್ಯಾಯಾಲಯ ಸಮನ್ಸ್‌ ಜಾರಿ ಮಾಡಿತ್ತು. ನಂತರ ನ್ಯಾಯಾಲಯಕ್ಕೆ ಪ್ರತ್ಯೇಕವಾಗಿ ಹಾಜರಾಗಿದ್ದ ಶ್ರುತಿ ಮತ್ತು ಚಂದ್ರಚೂಡ ಅವರು, ವಿವಾಹವನ್ನು ಅಸಿಂಧು­ಗೊಳಿ­ಸಲು ತಮ್ಮ ತಕರಾರು ಇಲ್ಲ ಎಂದು ಲಿಖಿತವಾಗಿ ಹೇಳಿಕೆ ಸಲ್ಲಿಸಿದ್ದರು.

ಇದಕ್ಕೂ ಮೊದಲು ಶ್ರುತಿ ಅವರು ಚಲನಚಿತ್ರ ನಿರ್ದೇಶಕ ಎಸ್‌. ಮಹೇಂದರ್‌ ಅವರನ್ನು ಮದುವೆಯಾಗಿದ್ದರು. ಅದು 2009ರಲ್ಲಿ ಮುರಿದುಬಿದ್ದಿತ್ತು.

ವಿವಾದ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶ್ರುತಿ, ‘ನಾನು ಸಾಕಷ್ಟು ನೋವು ಅನುಭವಿಸಿದ್ದೇನೆ. ಎಲ್ಲವೂ ಸರಿಹೋಗಬಹುದು ಎಂಬ ಆಶಾಭಾವನೆ ಹೊಂದಿದ್ದೆ. ಆದರೆ ಹಾಗಾಗಲಿಲ್ಲ. ಮಂಜುಳಾ ಕೂಡ ಹೆಣ್ಣು. ಅವರಿಗೆ ಅನ್ಯಾಯ ಆಗಬಾರದು ಎಂಬ ಇಚ್ಛೆಯಿಂದ ವಿಚ್ಛೇದನಕ್ಕೆ ಅನುಮತಿ ನೀಡಿದೆ’ ಎಂದರು.

‘ಈ ಘಟನೆಯಿಂದ ನನಗೆ ನೋವಾಗಿದೆ. ಶ್ರುತಿ ನನ್ನಿಂದ ದೈಹಿಕವಾಗಿ ದೂರವಾಗಿರಬಹುದು. ಆದರೆ ಅವರು ಮಾನಸಿಕವಾಗಿ ನನ್ನಿಂದ ಯಾವತ್ತಿಗೂ ದೂರವಾಗುವುದಿಲ್ಲ’ ಎಂದು ಚಂದ್ರಚೂಡ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.