ADVERTISEMENT

ಸಂಘ ಪರಿವಾರಕ್ಕೆ ಆದ್ಯತೆ: ಸಿಎಂ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2011, 18:10 IST
Last Updated 18 ಫೆಬ್ರುವರಿ 2011, 18:10 IST

ಬೆಂಗಳೂರು: ‘ಸಂಘಟನೆಯ ಸೂಚನೆಯಂತೆ ಕೆಲಸ ಮಾಡುವ ಕಾರ್ಯಕರ್ತರನ್ನು ಸಿದ್ಧಮಾಡುವುದು ಮತ್ತು ಸಂಘ ಪರಿವಾರದ ಹಿನ್ನೆಲೆಯ ಶಾಸಕರು ಮುಂದಿನ ಚುನಾವಣೆಗಳಲ್ಲಿ ಗೆದ್ದುಬರುವಂತೆ ಮಾಡಲು ಈ ಸಮಾವೇಶ ಆಯೋಜಿಸಲಾಗುತ್ತಿದೆ, ಇದು ಚುನಾವಣಾ ಸಿದ್ಧತೆಯ ಸಮಾವೇಶ ಅಲ್ಲ’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ಪಷ್ಟಪಡಿಸಿದರು.

ಇಲ್ಲಿನ ಅರಮನೆ ಮೈದಾನದಲ್ಲಿ ಭಾನುವಾರ ನಡೆಯಲಿರುವ ಬೂತ್ ಮಟ್ಟದ ಬಿಜೆಪಿ ಕಾರ್ಯಕರ್ತರ ಸಮಾವೇಶಕ್ಕೆ ಪೂರ್ವಭಾವಿಯಾಗಿ ಶುಕ್ರವಾರ ಆಯೋಜಿಸಲಾಗಿದ್ದ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.

‘ಸರ್ಕಾರ ತನ್ನ ಅವಧಿ ಪೂರ್ಣಗೊಳಿಸುತ್ತದೆ’ ಎಂದು ಪುನರುಚ್ಛರಿಸಿದ  ಅವರು, ‘ಇನ್ನೂ 25-30 ವರ್ಷಗಳ ಕಾಲ ಕಾಂಗ್ರೆಸ್ ಮತ್ತು ಜೆಡಿಎಸ್‌ನವರನ್ನು ವಿರೋಧ ಪಕ್ಷದ ಸ್ಥಾನದಲ್ಲೇ ಕೂರಿಸುತ್ತೇವೆ’ ಎಂದರು.

‘ಕಾಂಗ್ರೆಸ್ ಹಠಾವೊ’: ಯುಪಿಎ ಸರ್ಕಾರದ ಹಗರಣಗಳ ಕುರಿತು ವಾಗ್ದಾಳಿ ನಡೆಸಿದ ಯಡಿಯೂರಪ್ಪ ಅವರು, ‘ಭಾರತೀಯರು ತಲೆತಗ್ಗಿಸುವ ರೀತಿಯಲ್ಲಿ ಕೇಂದ್ರ ಸರ್ಕಾರದ ಹಗರಣಗಳು ಹೊರಬರುತ್ತಿವೆ’ ಎಂದರು.

‘ಕಾಂಗ್ರೆಸ್ ಹಠಾವೊ, ದೇಶ್ ಬಚಾವೊ ಆಂದೋಲನ ಆರಂಭಿಸುವ ಕುರಿತಂತೆ ಬಿಜೆಪಿಯ ಕೇಂದ್ರ ನಾಯಕರು ಶೀಘ್ರದಲ್ಲೇ ತೀರ್ಮಾನ ತೆಗೆದುಕೊಳ್ಳಬಹುದು’ ಎಂದರು.

‘ಮಾರ್ಚ್ ಒಂದನೇ ವಾರದಿಂದ ನನ್ನ ರೀತಿ, ನೀತಿ, ನಡವಳಿಕೆಗಳಲ್ಲಿ ಬದಲಾವಣೆ ಆಗಲಿದೆ’ ಎಂದರು.ಇದಕ್ಕೂ ಮುನ್ನ ಮಾತನಾಡಿದ ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಅವರು ಭಾನುವಾರದ ಸಮಾವೇಶದ ಕುರಿತು ಮಾಹಿತಿ ನೀಡಿದರು.

‘ಸಮಾವೇಶದ ಸಿದ್ಧತಾ ಮಾಹಿತಿ ಮತ್ತು ಕಾರ್ಯಕ್ರಮದ ಕ್ಷಣಕ್ಷಣದ ನೇರಪ್ರಸಾರ ಪಕ್ಷದ ವೆಬ್‌ಸೈಟ್ www.bjp.org ನಲ್ಲಿ ಲಭ್ಯವಿರುತ್ತದೆ’ ಎಂದು ತಿಳಿಸಿದರು.
ಮುಖಂಡರಾದ ಆಯನೂರು ಮಂಜುನಾಥ್, ಸಿ.ಟಿ. ರವಿ, ಸಚಿವರಾದ ಸುರೇಶ್ ಕುಮಾರ್, ಆರ್. ಅಶೋಕ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.