ADVERTISEMENT

ಸಚಿವರ ಸಮ್ಮುಖದಲ್ಲೇ ಬಾಲ್ಯ ವಿವಾಹ!

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2011, 19:30 IST
Last Updated 9 ಅಕ್ಟೋಬರ್ 2011, 19:30 IST

ಗದಗ: ಭಾನುವಾರ ಗದಗನಲ್ಲಿ ಒಂದು ದಾಖಲೆ ನಿರ್ಮಾಣ. 750 ಜೋಡಿಗಳ ಸಾಮೂಹಿಕ ವಿವಾಹ. ಇದರಲ್ಲಿ 98 ಜೋಡಿ ಅಪ್ರಾಪ್ತರು! ಆಶ್ಚರ್ಯವೆಂದರೆ, ಈ ಭರ್ಜರಿ ಮದುವೆಗೆ ಸಾಕ್ಷಿಯಾದವರು :ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವ ಸಿ.ಸಿ. ಪಾಟೀಲ.

ಜಿಲ್ಲಾಧಿಕಾರಿ ಎಸ್. ಶಂಕರನಾರಾಯಣ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೀರಣ್ಣ ತುರಮರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರು ಎಲ್ಲರೂ ಕಾರ್ಯಕ್ರಮದಲ್ಲಿ ಹಾಜರಿದ್ದರು. ಆದರೂ ಇವರ ಸಮ್ಮುಖದಲ್ಲಿ ಅಪ್ರಾಪ್ತ ಜೋಡಿಗಳ ವಿವಾಹ ನಡೆದಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಎಂ.ಆರ್. ಮಮತಾ ಆರೋಪಿಸಿದ್ದಾರೆ.

ಬಿ. ಶ್ರೀರಾಮುಲು ಅಭಿಮಾನಿ ಬಳಗದ ವತಿಯಿಂದ ನಗರದ ವಿದ್ಯಾದಾನ ಸಮಿತಿ ಮೈದಾನದಲ್ಲಿ ಭಾನುವಾರ  ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಿತು.

ಸಾಮೂಹಿಕ ವಿವಾಹದಲ್ಲಿ ಹೆಸರು ನೋಂದಾಯಿಸಬೇಕಾದರೆ ವೈದ್ಯರ ದೃಢೀಕರಣ ಪತ್ರ ಇರಬೇಕು. ಇಲ್ಲಿ ನಡೆಯುತ್ತಿರುವ ವಿವಾಹದಲ್ಲಿ ಬಹುತೇಕ ಜೋಡಿಗಳಿಗೆ ವೈದ್ಯರು ಸುಳ್ಳು ದಾಖಲೆಪತ್ರಗಳನ್ನು ನೀಡಿರುವುದು ಕಂಡು ಬಂದಿದೆ.

ಸಾಮೂಹಿಕ ವಿವಾಹವನ್ನು ಆಯೋಜಿಸುವ ಸಂಘಟಕರು ಸಹ ಸಂಖ್ಯೆಗೋಸ್ಕರವಾಗಿ ಮದುವೆ ಜೋಡಿಗಳ ಪೂರ್ವಾಪರ ವಿಚಾರಿಸದೆ ಕೊನೆ ಗಳಿಗೆಯಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳುವುದರಿಂದ ಈ ರೀತಿಯ ಅವಘಡಗಳಿಗೆ ಎಡೆ ಮಾಡಿಕೊಟ್ಟಂತಾಗಿದೆ ಎಂದು ತಿಳಿಸಿದರು.

ಶಿಫಾರಸು: ಕಳೆದ ವರ್ಷ ಸಹ 31 ಅಪ್ರಾಪ್ತ ಜೋಡಿ ವಿವಾಹವಾಗಿರುವುದನ್ನು ಪತ್ತೆ ಹಚ್ಚಿ ಸರ್ಕಾರಕ್ಕೆ ವರದಿ ನೀಡಲಾಗಿದೆ. ದಾಖಲೆ ಪ್ರಮಾಣ ಪತ್ರ ನೀಡಿದ ವೈದ್ಯರಿಗೆ 10 ಸಾವಿರ ರೂಪಾಯಿ ದಂಡ ವಿಧಿಸಬೇಕು. ವೈದ್ಯರಿಗೆ ಒಂದು ಬಡ್ತಿಯನ್ನು ರದ್ದುಗೊಳಿಸಬೇಕು ಎಂದು ಶಿಫಾರಸು ಮಾಡಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.