ಚಿಂಚೋಳಿ (ಕಲಬುರ್ಗಿ ಜಿಲ್ಲೆ): ಸಮಾಜ ಸುಧಾರಕರ ಪುತ್ಥಳಿಗಳು ನಿಮಗೆ ಏನು ಮಾಡಿವೆ ಎಂದು ಸಂಸದ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದರು.
ತಾಲ್ಲೂಕಿನ ನಾಗರಾಳದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಮಾತನಾಡಿ ಲೆನಿನ್, ಪೆರಿಯಾರ್ ರಾಮಸ್ವಾಮಿ, ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗಳನ್ನು ಧ್ವಂಸ ಹಾಗೂ ವಿರೂಪಗೊಳಿಸುವ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
’ಎಲ್ಲರೂ ಕೂಡಿ ದೇಶ ಕಟ್ಟಬೇಕು. ಇದಕ್ಕಾಗಿ ಸಹಿಷ್ಣುತೆ ಅತ್ಯಂತ ಮುಖ್ಯ. ಸಮಾಜ ಒಡೆಯುವ ವಿಚಾರ ಅತ್ಯಂತ ಅಪಾಯಕಾರಿ’ ಎಂದರು.
‘ವಿಚಾರಭೇದ ಇರುವವರು ಎಲ್ಲಾ ಕಡೆ ಇದ್ದಾರೆ. ನಾವು ಯಾರೂ ಅವರಿಗೆ ತೊಂದರೆ ಕೊಟ್ಟಿಲ್ಲ. ಆದರೂ ಇಂತಹ ಘಟನೆಗಳು ನಡೆಯುವುದು ನೋವಿನ ಸಂಗತಿ’ ಎಂದರು.
‘ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಒತ್ತಾಯಿಸಿ ತೆಲುಗು ದೇಶಂ ಪಕ್ಷ ಹೋರಾಟ ಮಾಡುತ್ತಿದೆ. ಎನ್ಡಿಎ ಮೈತ್ರಿಕೂಟ ಸರ್ಕಾರದಲ್ಲಿದ್ದ ಆ ಪಕ್ಷದ ಸಚಿವರು ರಾಜೀನಾಮೆ ನೀಡಿದ್ದಾರೆ. ಸರ್ಕಾರದ ಪಾಲುದಾರ ಪಕ್ಷದ ಬೇಡಿಕೆಯನ್ನೇ ಪ್ರಧಾನಿ ನರೇಂದ್ರ ಮೋದಿ ಈಡೇರಿಸುತ್ತಿಲ್ಲ.
ಹೈದರಾಬಾದ್ ಕರ್ನಾಟಕ ಭಾಗಕ್ಕೂ 371(ಜೆ) ಜಾರಿಗೆ ಒತ್ತಾಯಿಸಿ ಎಸ್.ಎಂ ಕೃಷ್ಣ ಸರ್ಕಾರ ಮಾಡಿದ ಮನವಿಗೂ ಅಂದಿನ ಗೃಹ ಸಚಿವ ಎಲ್.ಕೆ.ಅಡ್ವಾಣಿ ನಿರಾಕರಿಸಿ, ಇದರಿಂದ ದೇಶ ಛಿದ್ರವಾಗುತ್ತದೆ ಎಂದಿದ್ದರು. ಯುಪಿಎ ಸರ್ಕಾರದ ಅವಧಿಯಲ್ಲಿ ಯಾವುದೇ ಸಂಘರ್ಷವಿಲ್ಲದೇ ವಿಶೇಷ ಸ್ಥಾನಮಾನ ದೊರೆಯುವಂತೆ ಮಾಡಿದ್ದೇನೆ. ದೇಶ ಛಿದ್ರವಾಯಿತೇ’ ಎಂದು ಪ್ರಶ್ನಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.