ADVERTISEMENT

`ಸರ್ಕಾರ ಉರುಳಿಸುವ ತಾಕತ್ತು ಬಿಎಸ್‌ವೈಗೆ ಇಲ್ಲ'

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2012, 22:00 IST
Last Updated 8 ಡಿಸೆಂಬರ್ 2012, 22:00 IST

ಮೈಸೂರು: `ಪಕ್ಷದಿಂದ ಹೊರ ನಡೆದಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪಕ್ಷ್ಷ ಉರುಳಿಸುವ ಸಾಮರ್ಥ್ಯವಿಲ್ಲ.

ಹತಾಶೆಗೊಂಡಿರುವ ಅವರು ನನ್ನಿಂದಲೇ ಸರ್ಕಾರ ಉಳಿದಿದೆ ಎಂದು ಹೇಳಿಕೆ ನೀಡುತ್ತಿದ್ದಾರೆ' ಎಂದು ಉನ್ನತ ಶಿಕ್ಷಣ ಸಚಿವ ಸಿ.ಟಿ.ರವಿ ಹೇಳಿದರು.

ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಶನಿವಾರ ಮೈಸೂರಿಗೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, `ಪಕ್ಷದ ಬಗ್ಗೆ ಕೇವಲವಾಗಿ ಮಾತನಾಡುತ್ತಿರುವುದು, ಕ್ಷವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತಿರುವುದು ನೋವು ತಂದಿದೆ. ಪಕ್ಷ ಯಡಿಯೂರಪ್ಪನವರಿಗೆ ಎಲ್ಲವನ್ನೂ ಕೊಟ್ಟಿದೆ. ಅಧಿಕಾರ ಕಳೆದುಕೊಂಡಿರುವ ಅವರು ವಿಲಿವಿಲಿ ಒದ್ದಾಡುತ್ತ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ' ಎಂದು ಕುಟುಕಿದರು.

`ಶಸ್ತ್ರಚಿಕಿತ್ಸೆಯನ್ನು ವೈದ್ಯ ಮುಂದೂಡಿದ್ದಾನೆ ಎಂದರೆ ಅದರರ್ಥ ಆತನಿಗೆ ಸಾಮರ್ಥ್ಯ ಇಲ್ಲ ಎಂದಲ್ಲ. ಬೇರೆ ಏನೋ ಕಾರಣ ಇರುತ್ತವೆ. ಒಟ್ಟಾರೆ ರೋಗಿ ಬದುಕಬೇಕು ಎಂಬುದು ವೈದ್ಯನ ಆಶಯವಾಗಿರುತ್ತದೆ. ಕೇಂದ್ರದಲ್ಲಿ ವಾಜಪೇಯಿ ಹಾಗೂ ರಾಜ್ಯದಲ್ಲಿ ಯಡಿಯೂರಪ್ಪ ಅವರ ಮೇಲೆ ಜನತೆ ವಿಶ್ವಾಸವಿಟ್ಟು ಅಧಿಕಾರ ನೀಡಿದ್ದರು. ಆದರೆ ಆ ವಿಶ್ವಾಸವನ್ನು ಯಡಿಯೂರಪ್ಪ ಉಳಿಸಿಕೊಳ್ಳಲಿಲ್ಲ. ಈಗಲಾದರೂ ಬಿಎಸ್‌ವೈ ಅಧಿಕಾರ ಏಕೆ ಹೋಯಿತು ಎಂಬುದರ ಆತ್ಮಾವಲೋಕನ ಮಾಡಿಕೊಳ್ಳಲಿ' ಎಂದು ಕಿವಿಮಾತು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.