ಮೈಸೂರು: ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಇಬ್ಬರಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ತಲಾ ₹ 24 ಸಾವಿರ ದಂಡ ವಿಧಿಸಿ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಶನಿವಾರ ಆದೇಶ ನೀಡಿದೆ.
ಕೆ.ಆರ್.ನಗರ ತಾಲ್ಲೂಕಿನ ಬಸವರಾಜಪುರದ ಚೇತನ್ (28), ವಸಂತ್ (27) ಶಿಕ್ಷೆಗೆ ಗುರಿಯಾದವರು. ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಜಿಲ್ಲಾ ನ್ಯಾಯಾಲಯ 20 ವರ್ಷ ಶಿಕ್ಷೆ ವಿಧಿಸಿದ ಎರಡನೇ ಪ್ರಕರಣ ಇದಾಗಿದೆ.
2012ರ ಸೆ. 1ರಂದು ಬಸವರಾಜಪುರದ ಹೊರವಲಯದ ನಿರ್ಜನ ಪ್ರದೇಶದಲ್ಲಿ 17 ವರ್ಷದ ಬಾಲಕಿಯು ತನ್ನ ಪ್ರಿಯತಮನೊಂದಿಗೆ ಕುಳಿತಿದ್ದಳು. ಇಲ್ಲಿಗೆ ಹೋದ ಚೇತನ್, ವಸಂತ್, ಬೇರೆ ಜಾತಿಗೆ ಸೇರಿದ್ದ ಪ್ರೇಮಿಗಳನ್ನು ಪ್ರಶ್ನಿಸಿದ್ದರು. ಸ್ನೇಹಿತರಿಗೆ ದೂರವಾಣಿ ಕರೆ ಮಾಡಲು ಯತ್ನಿಸಿದ ಪ್ರಿಯತಮನ ಮೊಬೈಲ್ ಫೋನ್ ಕಿತ್ತುಕೊಂಡು ಹಲ್ಲೆ ನಡೆಸಲು ಯತ್ನಿಸಿದ್ದರು. ಬಾಲಕಿ ಹಾಗೂ ದ್ವಿಚಕ್ರ ವಾಹನ ಬಿಟ್ಟು ಪ್ರಿಯತಮ ಪರಾರಿಯಾಗಿದ್ದನು.
ನಂತರ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ದುಷ್ಕರ್ಮಿಗಳು ಈ ದೃಶ್ಯವನ್ನು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು ಎಂದು ಸರ್ಕಾರಿ ವಕೀಲ ಮಹಂತಪ್ಪ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.